ಹೈ-ಕ ಭಾಗದ ಶಿಕ್ಷಕರಿಗೆ ಕನಿಷ್ಠ ಸೇವಾವಧಿ ವಿನಾಯ್ತಿಗೆ ಆಗ್ರಹ
Team Udayavani, Jun 18, 2019, 3:00 AM IST
ಬೆಂಗಳೂರು: ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಕಡ್ಡಾಯವಾಗಿ ಕನಿಷ್ಠ 10 ವರ್ಷ ಪೂರೈಸಿದ ನಂತರವೇ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅವಕಾಶ ಎಂಬ ನಿಯಮದಿಂದ ವಿನಾಯಿತಿ ನೀಡುವಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಹತ್ತು ವರ್ಷ ಸೇವೆ ಸಲ್ಲಿಸಿರಬೇಕೆಂಬ ನಿಯಮದಿಂದ ಹೈ-ಕ ಭಾಗದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ 371 (ಜೆ) ಕಾಯ್ದೆ ಜಾರಿಯಾದ 2015ರ ನಂತರ ನೇಮಕವಾದ ಶಿಕ್ಷಕರಿಗೆ ಈ ನಿಯಮ ಅನ್ವಯಿಸಬೇಕು.
ಅದಕ್ಕೂ ಮೊದಲು ನೇಮಕವಾಗಿರುವ ಶಿಕ್ಷಕರಿಗೆ ನಿಯಮ ಕಡ್ಡಾಯ ಮಾಡಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್ ಅವರನ್ನು ಸೋಮವಾರ ಭೇಟಿ ಮಾಡಿದ್ದ ಸಂಘದ ಅಧ್ಯಕ್ಷ ವಿ.ಎಂ. ನಾರಾಯಣ ಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಚಂದ್ರಶೇಖರ ಮನವಿ ಮಾಡಿಕೊಂಡಿದ್ದಾರೆ.
“ಸಿ’ ವಲಯದೊಳಗಿನ ಆಂತರಿಕ ವರ್ಗಾವಣೆ ಹಾಗೂ ಎಲ್ಲ ವಲಯಗಳಿಗೆ ಮುಕ್ತವಾಗಿ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಬೇಕು. ಕಡ್ಡಾಯ ವರ್ಗಾವಣೆಗೆ ಒಳಪಡುವ ಶಿಕ್ಷಕರಿಗೂ ಕೋರಿಕೆ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಮಾಜಿ ಸೈನಿಕರು ಹಾಗೂ ಸೈನಿಕರ ಪತ್ನಿಯರಿಗೆ ವಿನಾಯಿತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಯನ್ನು ಇಲಾಖೆಯ ಮುಂದಿಟ್ಟಿದ್ದಾರೆ.