ಹುಟ್ಟೂರು ತಲುಪಿದ ಸಂಚಾರಿ ವಿಜಯ್ ಪಾರ್ಥಿವ ಶರೀರ: ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ
Team Udayavani, Jun 15, 2021, 3:05 PM IST
ಚಿಕ್ಕಮಗಳೂರು : ಅಪಘಾತದಿಂದ ಮೃತಪಟ್ಟಿರುವ ನಟ ಸಂಚಾರಿ ವಿಜಯ್ ಅವರ ಅಂತಿಮ ಸಂಸ್ಕಾರ ಇಂದು ಚಿಕ್ಕಮಗಳೂರಿನಲ್ಲಿ ನಡೆಯಲಿದ್ದು, ವಿಜಯ್ ಪಾರ್ಥಿವ ಶರೀರ ಸದ್ಯ ಸಂಚಾರಿ ವಿಜಯ್ ಹುಟ್ಟೂರಿಗೆ ತಲುಪಿದೆ.
ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯುತ್ತಿದೆ. ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಲಾಗುತ್ತಿದೆ.
ನಟ ಸಂಚಾರಿ ವಿಜಯ್ ಅವರ ಅಂತಿಮ ದರ್ಶನಕ್ಕಾಗಿ ಜನರು ಕಾದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸ್ಥಳದಲ್ಲೇ ಎಸ್ಪಿ ಮತ್ತು ಡಿಸಿ ಮೊಕ್ಕಾಂ ಹೂಡಿದ್ದಾರೆ.
ಇನ್ನು ನಟ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸಿಂಗ್ ಮಾಡಲಾಗಿದೆ. ಸಮಾಧಿ, ಅಂತಿಮ ದರ್ಶನಕ್ಕೆ ಇಡುವ ಸ್ಥಳದಲ್ಲಿ ಸ್ಯಾನಿಟೈಸಿಂಗ್ ಮಾಡಲಾಗಿದೆ.