ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಾವರ್ಕರ್ ವಿರೋಧ: ಸಿ.ಟಿ. ರವಿ
Team Udayavani, Aug 16, 2022, 11:40 PM IST
ಬೆಂಗಳೂರು: ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವೀರ ಸಾವರ್ಕರ್ ಅವರನ್ನು ವಿರೋಧಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದುರ್ದೈವದ ಸಂಗತಿ ಎಂದರೆ ವೀರ ಸಾವರ್ಕರ್ರನ್ನು ಕೆಲವು ಮತೀಯವಾದಿ ಸಂಘಟನೆಗಳು ವಿರೋಧಿಸುತ್ತಿವೆ. ಸಾವರ್ಕರ್ ಬಗ್ಗೆ ವಾಜಪೇಯಿ ಹೇಳಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ.
ಸಾವರ್ಕರ್ ಅಂದರೆ ಕಿಚ್ಚು, ದೇಶಭಕ್ತಿ, ಸಮರ್ಪಣೆ ಎನ್ನುವ ಮಾತನ್ನು ಹೇಳಿದ್ದರು. ಇಂದಿರಾ ಗಾಂಧಿಯವರು ಮೇ 28 -1970ರಲ್ಲಿ ಸಾವರ್ಕರ್ ಕುರಿತ ಅಂಚೆ ಚೀಟಿ ಜಾರಿಗೆ ತಂದಿದ್ದರು.
2003ರಲ್ಲಿ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್ನಲ್ಲಿ ಅವರ ಭಾವಚಿತ್ರ ಅನಾವರಣಗೊಳಿಸಲಾಗಿದೆ. ಹಿಂದೆ ಪಾಕಿಸ್ತಾನ, ಭಾರತವನ್ನು ಆಕ್ರಮಿಸಿದಾಗ ಸಾವರ್ಕರ್ ದೂರದೃಷ್ಟಿಯಿಂದ ಜಯ ಸಿಕ್ಕಿತ್ತು. ಬಹಳ ಜನರಿಗೆ ಸತ್ಯದ ಅರಿವಿಲ್ಲ, ಆ ಸಾಲಿಗೆ ಸಿದ್ದರಾಮಯ್ಯ ಸೇರಿರುವುದು ದುರದೃಷ್ಟಕರ ಸಂಗತಿ ಎಂದರು.