ಶಾ ಹೇಳಿಕೆ: ಶ್ರೀರಾಮುಲುಗೆ ಸಂಕಟ
Team Udayavani, Apr 4, 2018, 7:00 AM IST
ಬೆಂಗಳೂರು: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ಬಳ್ಳಾರಿ ಗಣಿ ಸಹೋದರರಲ್ಲಿ ಮುಂದೇನು ಎಂಬ ತಲೆಬಿಸಿ ಮೂಡಿಸಿದ್ದರೆ, ಸಂಸದ ಶ್ರೀರಾಮುಲು ಅಡಕತ್ತರಿಯಲ್ಲಿ ಸಿಲುಕಿ
ಹಾಕಿಕೊಂಡಂತಾಗಿದ್ದಾರೆ.
ಅತ್ತ ಆಪ್ತ ಜನಾರ್ದನ ರೆಡ್ಡಿ ಬಿಟ್ಟುಕೊಡುವಂತಿಲ್ಲ, ಇತ್ತ ಬಿಜೆಪಿ ನಾಯಕರ ವಿರುದ್ಧ ಮಾತನಾಡುವಂತಿಲ್ಲ. ಹೀಗಾಗಿ, ರೆಡ್ಡಿ
ಸಹೋದರರ ವಿಚಾರದಲ್ಲಿ ಮೃಧು ಧೋರಣೆ ತಾಳುವಂತೆ ಬಿಜೆಪಿ ನಾಯಕರ ಮೊರೆ ಹೋಗಿದ್ದಾರೆ. ಇದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಶ್ರೀರಾಮುಲು, ಜನಾರ್ದನ ರೆಡ್ಡಿ ಕೈ ಬಿಡಬಾರದೆಂದು ಅಲವತ್ತುಕೊಂಡಿದ್ದಾರೆಂದು ಹೇಳಲಾಗಿದೆ.
ಯಡಿಯೂರಪ್ಪ ಸಹ ಅಮಿತ್ ಶಾ ಹೇಳಿದ ಮೇಲೆ ನಾವೇನೂ ಮಾಡುವಂತಿಲ್ಲ. ಪ್ರತಿಪಕ್ಷಗಳಿಗೆ ಅಸವಾಗಬಾರದೆಂಬ ಕಾರಣಕ್ಕೆ ಆ ಮಾತು ಹೇಳಿರಬಹುದು.
ಆದರೆ, ಸದ್ಯಕ್ಕೆ ಜನಾರ್ದನ ರೆಡ್ಡಿ ಮೌನವಾಗಿರಲಿ. ತಮ್ಮದೇ ಆದ ಹಂತದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳದೆ ಪಕ್ಷದ ಪರ
ಕೆಲಸ ಮಾಡಲಿ. ಅವರ ವಿರುದಟಛಿದ ಪ್ರಕರಣಗಳೆಲ್ಲ ಮುಗಿದ ಬಳಿಕ ಸ್ಥಾನಮಾನದ ಬಗ್ಗೆ ಹೈಕಮಾಂಡ್ ಜತೆ ನಾನೇ
ಮಾತನಾಡುತ್ತೇನೆಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಶ್ರೀರಾಮುಲು ನಾನೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ. ಬಳ್ಳಾರಿ, ರಾಯಚೂರು ಅಥವಾ ಬೆಳಗಾವಿ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಲ್ಲಿ ಟಿಕೆಟ್ ಕೊಡಿ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ ರೆಡ್ಡಿ ಸ್ಪರ್ಧಿಸಲಿ ಎಂದು ಬೇಡಿಕೆ ಇಟ್ಟಿದ್ದಾರೆ.
ಟಿಕೆಟ್ ವಿಚಾರದಲ್ಲಿ ಅಮಿತ್ ಶಾ ಅವರೇ ತೀರ್ಮಾನ ಕೈಗೊಳ್ಳಬೇಕಿದೆ. ಟಿಕೆಟ್ಗಾಗಿ ಇತರೆ ಸಂಸದರು, ವಿಧಾನಪರಿಷತ್ ಸದಸ್ಯರು ಬೇಡಿಕೆ ಇಟ್ಟರೆ ಕಷ್ಟವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು ಎನ್ನಲಾಗಿದೆ. ಮುಂಬೈಗೆ ಹೋಗಿರುವ ಜನಾರ್ದನ ರೆಡ್ಡಿ ಬುಧವಾರ ಬಳ್ಳಾರಿಗೆ ಬರಲಿದ್ದು ಅವರನ್ನು ಭೇಟಿಯಾಗಲಿರುವ ರಾಮುಲು, ಯಡಿಯೂರಪ್ಪ ಅವರೊಂದಿಗೆ ನಡೆದ
ಮಾತುಕತೆ ಮಾಹಿತಿ ನೀಡಲಿದ್ದಾರೆ. ಪಕ್ಷ ನಿಮ್ಮ ಜತೆ ಇರಲಿದೆ ಎಂಬ ಧೈರ್ಯ ನೀಡಲಿದ್ದಾರೆಂದು ಹೇಳಲಾಗಿದೆ.