ಶಾಮನೂರು ಶಿವಶಂಕರಪ್ಪ ಅವರ ವಿಶಾಲ ಜಮೀನಿನಲ್ಲಿ ಸಿದ್ದರಾಮೋತ್ಸವ
Team Udayavani, Jul 9, 2022, 5:06 PM IST
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಗರದ ಹೊರವಲಯದಲ್ಲಿ ದಾವಣಗೆರೆ-ಹರಿಹರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಾಮನೂರು ಶಿವಶಂಕರಪ್ಪ ಒಡೆತನದ ವಿಶಾಲ (45 ಎಕರೆ) ಜಮೀನಿನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳು ಶನಿವಾರ ನಗರಕ್ಕೆ ಭೇಟಿ ನೀಡಿ, ನಗರದಲ್ಲಿರುವ ಎರಡು ಸ್ಥಳಗಳನ್ನು ಪರಿಶೀಲಿಸಿ, ಅಂತಿಮವಾಗಿ ಹೆದ್ದಾರಿಗೆ ಹೊಂದಿಕೊಂಡಿರುವ ವಿಶಾಲ ಜಮೀನನ್ನು ಕಾರ್ಯಕ್ರಮಕ್ಕಾಗಿ ಅಂತಿಮಗೊಳಿಸಿತು.
ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸಿರುವ ಸಿದ್ದರಾಮಯ್ಯ ೭೫ಅಮೃತ ಮಹೋತ್ಸವ ಆಗಸ್ಟ್ ೩ರಂದು ನಡೆಯಲಿದ್ದು ಪ್ರಥಮ ಕಾರ್ಯವಾಗಿ ಕಾರ್ಯಕ್ರಮ ನಡೆಸುವ ಸ್ಥಳ ಅಂತಿಮಗೊಳಿಸಿದಂತಾಗಿದೆ.
ಸ್ಥಳ ಪರಿಶೀಲಿಸಿ ಅಂತಿಮಗೊಳಿಸಲು ಆಗಮಿಸಿದ ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಎನ್. ರಾಜಣ್ಣ, ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರಾದ ಡಾ.ಹೆಚ್.ಸಿ.ಮಹಾದೇವಪ್ಪ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್, ಭೈರತಿ ಸುರೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಜಯಮಾಲಾ, ಉಮಾಶ್ರೀ, ವಿ.ಆರ್. ಸುದರ್ಶನ್, ಡಾ. ಎಲ್.ಹನುಮಂತಯ್ಯ, ಹೆಚ್.ಆಂಜನೇಯ, ಅಬ್ದುಲ್ ಜಬ್ಬಾರ್, ಎಸ್. ರಾಮಪ್ಪ, ಬಸವರಾಜ ಶಿವಣ್ಣನವರ ಸೇರಿದಂತೆ ಇತರರು ಇದ್ದರು.