ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಗೊತ್ತಿತ್ತು: ಮನ್ಸೂರ್ ಸೋಲಿಗೆ ಸಿದ್ದರಾಮಯ್ಯ ವ್ಯಾಖ್ಯಾನ
ಪ್ರವಾದಿ ಬಗ್ಗೆ ಮಾತನಾಡುವುದು ಸರಿಯಲ್ಲ, ಯಾರೂ ಗಲಭೆ ಮಾಡಬಾರದು
Team Udayavani, Jun 11, 2022, 5:08 PM IST
ಬೆಂಗಳೂರು: ನಮಗೆ ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಗೊತ್ತಿತ್ತು. ಯಾರಾದರೂ ಮನಸಾಕ್ಷಿ ವೋಟ್ ಹಾಕುತ್ತಾರೆ ಅಂದುಕೊಂಡಿದ್ದೆವು ಎಂದು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಸೋಲಿನ ಬಗ್ಗೆ ಸಿದ್ದರಾಮಯ್ಯ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಿಂದ ಕ್ರಾಸ್ ವೋಟ್ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಒಬ್ಬರು ಜೆಡಿಎಸ್ ನವರು ಮತ ಹಾಕಿದರು, ಪಕ್ಷೇತರ ಅಭ್ಯರ್ಥಿಯೊಬ್ಬರು ಮತ ಹಾಕಿದರು. ನಮಗೆ 71 ಮತಗಳು ಬಂದಿವೆ. ಎರಡು ಹೆಚ್ಚುವರಿ ಮತಗಳು ಬಂದಿವೆ ಎಂದರು.
ನಮ್ಮವರು ಎಲ್ಲೂ ಕ್ರಾಸ್ ವೋಟ್ ಹಾಕಲಿಲ್ಲ. ಮೊದಲ ಮತ್ತು ಎರಡನೇ ಪ್ರಾಶಸ್ತ್ಯದಲ್ಲಿ ಅಡ್ಡ ಮತದಾನ ವಾಗಿಲ್ಲ.ನಮ್ಮವರು ನಮಗೇ ಹಾಕಿದ್ದಾರೆ. ಬೇರೆಯವರು ಹಾಕಿರಬಹುದು ಎಂದರು.
ನೂಪುರ ಶರ್ಮಾ ವಿರುದ್ಧ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಅವರ ಜತೆ ಇನ್ನೊಬ್ಬರು ಮಾತನಾ ಡಿದ್ದರು, ಅವರ ಮೇಲೂ ಕೇಸ್ ಹಾಕಬೇಕು. ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡುವುದು ಸರಿಯಲ್ಲ. ಮತ್ತೊಂದು ಸಮುದಾಯಕ್ಕೆ ದ್ವೇಷ ಬಿತ್ತಿದಂತಾಗುತ್ತದೆ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳ ಬೇಕು ಎಂದರು.
ಯಾರೂ ಗಲಭೆ ಮಾಡಬಾರದು, ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಕಾನೂನು ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ, ಪ್ರತಿಭಟನೆಗೆ ಅವಕಾಶವಿದೆ ಎಂದರು.
ಎಲ್ಲಿದೆ ಅವರಿಗೆ ಅಲ್ಪಸಂಖ್ಯಾತರ ಒಲವು
ಕಾಂಗ್ರೆಸ್ ಬಿಜೆಪಿ ಬಿ ಟೀಂ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ.ನಾವು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೆವು. ಅವರು ಮೊದಲು ಅಭ್ಯರ್ಥಿ ಹಾಕಿದ್ದರಾ ? ಅವರು ಬಾಯಿಗೆ ಬಂದಂತೆ ಹೇಳುತ್ತಾರೆ. ನಮ್ಮ ಅಭ್ಯರ್ಥಿ ಒಂದು ದಿನ ಮುಂಚೆ ಹಾಕಿದ್ದೆವು. ದೇವೇಗೌಡರು ಹಾಕಿದ್ದಾಗ ನಾವು ಹಾಕಿದ್ದೇವಾ? ಬಿಜೆಪಿ ಗೆಲ್ಲಬಾರದೆಂದು ನಾವು ಹಾಕಿರಲಿಲ್ಲ. ಮತ್ತೆ ಬಿ ಟೀಂ ಅನ್ನೋದನ್ನ ತೋರಿಸಿಕೊಂಡಿದ್ದಾರೆ. ಅವರು ಮತಾಂತರ ನಿಷೇಧ ಕಾಯ್ದೆ ತಂದಾಗ ವಿರೋಧ ಮಾಡಿದರಾ? ಗೋ ಹತ್ಯೆ ನಿಷೇಧ ಕಾಯ್ದೆ ಗೆ ವಿರೋಧ ಮಾಡಿದರೇ? ಅಲ್ಲೂ ಸರ್ಕಾರಕ್ಕೆ ಬೆಂಬಲ ನೀಡಿದರು.ಎಲ್ಲಿದೆ ಅವರಿಗೆ ಅಲ್ಪಸಂಖ್ಯಾತರ ಒಲವು ಎಂದು ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.