ಸಿದ್ದು, ಸಿಎಂಗೆ ಸಾಮಾನ್ಯ ಜ್ಞಾನವೇ ಇಲ್ಲ: ಶೆಟ್ಟರ್
Team Udayavani, Jun 30, 2019, 3:00 AM IST
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಾಮಾನ್ಯಜ್ಞಾನ ಇಲ್ಲದಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಎಂದು ಜನರು ತೀರ್ಪು ನೀಡಿದ್ದಾರೆ. ಆದರೆ, ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮೋದಿಗೆ ಮತ ಹಾಕಿ, ನನ್ನ ಬಳಿ ಕೆಲಸ ಕೇಳುತ್ತಿದ್ದಿರಿ ಎಂದು ಗದರುವ ಮೂಲಕ ಕುಮಾರಸ್ವಾಮಿ ಜವಾಬ್ದಾರಿ ಸ್ಥಾನದಲ್ಲಿದ್ದು ಸಾಮಾನ್ಯ ಜ್ಞಾನ ಇಲ್ಲದವರಂತೆ ವರ್ತಿಸಿದ್ದಾರೆ ಎಂದರು.
ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಅವರನ್ನು ಟೀಕೆ ಮಾಡದಿದ್ದರೆ ದಿನ ಕಳೆಯುವುದಿಲ್ಲ. ಇಬ್ಬರೂ ಸಾಮಾನ್ಯ ಜ್ಞಾನವಿಲ್ಲದವರಂತೆ ವರ್ತಿಸುತ್ತಿದ್ದಾರೆ. ಅವರು ಬೇಕಾಬಿಟ್ಟಿ ಹೇಳಿಕೆ ಕೊಡುವ ಬದಲು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಒಳಿತು.
ಕಾಂಗ್ರೆಸ್ ಹಾಗೂ ಜೆಡಿಎಸ್ನ ಜಗಳದಿಂದ ಕುಮಾರಸ್ವಾಮಿ ಒತ್ತಡದಲ್ಲಿದ್ದಾರೆ. ಹೀಗಾಗಿ, ತಾಳ್ಮೆ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಒತ್ತಡದಲ್ಲಿ ಆಡಳಿತ ಮಾಡುವ ಬದಲು ರಾಜೀನಾಮೆ ನೀಡುವುದು ಒಳಿತು ಎಂದರು.