ಅಕ್ರಮ ಅದಿರು ಎಸ್ಐಟಿ ತನಿಖೆ:ಸಂಪುಟ ಉಪಸಮಿತಿ ಶಿಫಾರಸು
Team Udayavani, Nov 5, 2017, 3:05 PM IST
ಬೆಂಗಳೂರು: ರಾಜ್ಯದ ಬೇಲೇಕೇರಿ ಮತ್ತು ನವಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸುವುದರ ಜತೆಗೆ, ದೇಶದ ವಿವಿಧ ಬಂದರುಗಳಿಂದ ರಾಜ್ಯದ ಅದಿರನ್ನು ವಿದೇಶಗಳಿಗೆ ಅಕ್ರಮವಾಗಿ ರಫ್ತು ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಕಂಪೆನಿಗಳಿಂದ ಆ ನಷ್ಟ ವಸೂಲಿ ಮಾಡುವಂತೆ ಸಚಿವ ಸಂಪುಟ ಉಪಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ವಿಧಾನಸೌಧದಲ್ಲಿ ಶನಿವಾರ ಸಚಿವ ಎಚ್.ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಉಪಸಮಿತಿಯ ಈ ಶಿಫಾರಸು ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಅಕ್ರಮ ಗಣಿಗಾರಿಕೆ, ಅದಿರು ರಫ್ತು ಬಗ್ಗೆ ಈ ಹಿಂದೆ ಸರಕಾರ ರಚಿಸಿದ್ದ ಎಸ್ ಐಟಿ ಈಗಾಗಲೇ ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಕೈಬಿಟ್ಟಿರುವ ಪ್ರಕರಣಗಳನ್ನೂ ಎಸ್ಐಟಿಗೆ ವಹಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ. ತನಿಖೆಯನ್ನು ಎಸ್ಐಟಿಗೆ ವಹಿಸಲು ಕೆಲವು ತಾಂತ್ರಿಕ ತೊಂದರೆಗಳಿದ್ದು, ಅವುಗಳನ್ನು ಬಗೆಹರಿಸುವುದರ ಜತೆಗೆ ಮತ್ತಷ್ಟು ಸಿಬಂದಿಯನ್ನು ಎಸ್ಐಟಿಗೆ ನೇಮಿಸಿ ಅದನ್ನು ಬಲವರ್ಧನೆ ಮಾಡುವ ಬಗ್ಗೆಯೂ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.