ಸಮಾಜ ಕಲ್ಯಾಣ ನೀನು ತಗೋ, ವಸತಿ ಖಾತೆ ನನಗೆ ಕೊಡು!
Team Udayavani, Feb 13, 2020, 3:06 AM IST
ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಮತ್ತು ವಸತಿ ಸಚಿವ ವಿ.ಸೋಮಣ್ಣ, ಬುಧವಾರ ಜಿಲ್ಲಾಡಳಿತ ಭವನದಲ್ಲಿ ನಡೆಸಿದ ಫೋನ್ ಸಂಭಾಷಣೆ ರಾಜಕೀಯ ಕುತೂಹಲಕ್ಕೆ ಕಾರಣವಾಯಿತು.
ಜಿಲ್ಲಾಮಟ್ಟದ ಅಧಿಕಾರಿಗಳ ಎದುರಲ್ಲೇ ಈ ಚರ್ಚೆ ಫೋನ್ನಲ್ಲಿ ನಡೆಯಿತು. ಕಳೆದ ಎರಡು ದಿನಗಳ ಹಿಂದೆ ಖಾತೆಗಳ ಹಂಚಿಕೆ ನಡೆದಿದ್ದು, ಲೋಕೋಪಯೋಗಿ ಜತೆಗೆ ಸಮಾಜ ಕಲ್ಯಾಣ ಖಾತೆ ಕಾರಜೋಳರ ಬಳಿಯೇ ಇದೆ. ಹೀಗಾಗಿ, ಸೋಮಣ್ಣ ಅವರು ಸಂಭಾಷಣೆ ವೇಳೆ, “ನೀನು ಎರಡೆರಡು ಖಾತೆಯ ಸಾಹುಕಾರ’ ಎಂದು ಹೇಳಿದ್ದಕ್ಕೆ, ಕಾರಜೋಳರು, “ಸಮಾಜ ಕಲ್ಯಾಣ, ನೀನು ತಗೋ, ವಸತಿ ಖಾತೆ ನನಗೆ ಕೊಡು’ ಎಂದು ಆತ್ಮೀಯತೆಯಲ್ಲಿ ಹೇಳಿದರು.
ಸಂಭಾಷಣೆ ನಡೆದದ್ದು ಹೀಗೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ಕಾರಜೋಳರು, ಜಿಲ್ಲೆಗೆ ಮಂಜೂರಾದ 15 ಸಾವಿರ ವಸತಿ ಯೋಜನೆಗಳ ಕುರಿತು ಸೋಮಣ್ಣ ಅವರೊಂದಿಗೆ ಚರ್ಚಿಸಲು ಫೋನ್ ಕರೆ ಮಾಡಿದರು.
ಕಾರಜೋಳ: ಜಿಲ್ಲೆಗೆ 15 ಸಾವಿರ ಮನೆ ಮಂಜೂರಾಗಿದ್ದು, 174 ಕೋಟಿ ರೂ.ಅನುದಾನ ಬೇಕಾಗುತ್ತದೆ. ಬೆಂಗಳೂರು ಸಾಹುಕಾರ, ನಮ್ಮ ಜಿಲ್ಲೆಗೆ ಈ ಅನುದಾನ ಕೊಡು.
ಸೋಮಣ್ಣ: ನಿಮ್ಮ ಜಿಲ್ಲೆಗೇ ಅಷ್ಟೊಂದು ಹಣ ಕೊಟ್ಟರೆ ಬೇರೆ ಜಿಲ್ಲೆಯವರೂ ಕೇಳುತ್ತಾರೆ.
ಕಾರಜೋಳ: ಬೇರೆ ಜಿಲ್ಲೆಯ ಬಗ್ಗೆ ಮತ್ತೆ ವಿಚಾರ ಮಾಡೋಣ, ನಮ್ಮ ಜಿಲ್ಲೆಗೆ ಕೊಡು, ಬೆಂಗಳೂರು ಸಾಹುಕಾರ.
ಸೋಮಣ್ಣ: ನೀನು ಎರಡೆರಡು ಖಾತೆಯ ಸಾಹುಕಾರ.
ಕಾರಜೋಳ: ನೀನು ಬೇಕಾದರೆ ಸಮಾಜ ಕಲ್ಯಾಣ ಖಾತೆ ತಗೋ, ನನಗೆ ಹೌಸಿಂಗ್ (ವಸತಿ) ಕೊಡು.