ಹಣಕ್ಕಾಗಿ ತಂದೆಯನ್ನೇ ಹೊಡೆದು ಕೊಂದ ಪುತ್ರ
Team Udayavani, Jan 19, 2020, 3:00 AM IST
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ಶುಕ್ರವಾರ ರಾತ್ರಿ ಹಣ ನೀಡದ್ದಕ್ಕಾಗಿ ವ್ಯಕ್ತಿಯೊಬ್ಬ ತಂದೆಯನ್ನೇ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ. ಗೋಣಿಮರೂರು ಹಾಡಿಯ ಕರಿಯಪ್ಪ (46) ಎಂಬುವರನ್ನು ಅವರ ಪುತ್ರ ಲೋಕೇಶ್ (25) ಎಂಬಾತ ಕೊಲೆ ಮಾಡಿದ್ದಾನೆ.
ಈ ವೇಳೆ, ಕರಿಯಪ್ಪನ ಪತ್ನಿ ಲೀಲಾ ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ಲೋಕೇಶ್ ಮದ್ಯ ಸೇವಿಸಲು ತಂದೆಯ ಹತ್ತಿರ ಹಣ ಕೇಳಿದ. ಕರಿಯಪ್ಪ ಹಣ ನೀಡಲು ನಿರಾಕರಿಸಿದ. ಕೋಪಗೊಂಡ ಆರೋಪಿ, ಮರದ ದೊಣ್ಣೆಯಿಂದ ತಂದೆಯ ತಲೆಯ ಭಾಗಕ್ಕೆ ಹೊಡೆದ.
ಈ ವೇಳೆ, ತಡೆಯಲು ಬಂದ ತಾಯಿ ಲೀಲಾಗೂ ದೊಣ್ಣೆಯಿಂದ ಬಾರಿಸಿದ. ಗಂಭೀರವಾಗಿ ಗಾಯಗೊಂಡ ಕರಿಯಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಅಸುನೀಗಿದರು. ಲೀಲಾರನ್ನು ಮೈಸೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಳಿಕ, ಮನೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಶನಿವಾರ ಮಧ್ಯಾಹ್ನ ಬಾಣಾವರ ಸಮೀಪ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.