ದೇಗುಲಗಳ ವರ್ಗೀಕರಣಕ್ಕೆ ಸ್ಪೀಕರ್ ಅಸಮಾಧಾನ
Team Udayavani, Dec 18, 2018, 6:00 AM IST
ವಿಧಾನಸಭೆ: “ದೇವಸ್ಥಾನವನ್ನು ಎ, ಬಿ, ಸಿ ಎಂದು ವರ್ಗೀಕರಿಸಿರುವುದು ನನ್ನನ್ನು ದಂಗುಬಡಿಸಿದೆ. ದೇವರಿಗೆ ಈ ಸ್ಥಿತಿ ಬರಬಾರದಿತ್ತು’.. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯ ಅಭಿವೃದ್ಧಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆದಾಗ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ಹೀಗೆ.
ದೇವಸ್ಥಾನಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತ್ಯೇಕವಾಗಿ ಕೇಳಿದ ಪ್ರಶ್ನೆ ಕೆಲಕಾಲ ಬಿಸಿ ಚರ್ಚೆಗೂ ಕಾರಣವಾಯಿತು. ಆರಾಧನಾ ಯೋಜನೆಯಡಿ ಸರ್ಕಾರದಿಂದ ಬರುತ್ತಿರುವ ಅನುದಾನ ಸಾಕಾಗುತ್ತಿಲ್ಲ ಎಂದು ಎಚ್.ಕೆ.ಕುಮಾರಸ್ವಾಮಿ ಹಾಗೂ ಆರಾಧನಾ ಯೋಜನೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ವಿಶ್ವೇ ಶ್ವರ ಹೆಗಡೆ ಕಾಗೇರಿ ಕೇಳಿದ ಪ್ರಶ್ನೆಗೆ ಮುಜರಾಯಿ ಸಚಿವ ರಾಜಶೇಖರ್ ಪಾಟೀಲ್ ಉತ್ತರಿಸಿ, ರಾಜ್ಯದಲ್ಲಿ ಎ ದರ್ಜೆಯ 191, ಬಿ ದರ್ಜೆಯ 158 ಹಾಗೂ ಸಿ ದರ್ಜೆಯ 34215 ದೇಗುಲಗಳಿವೆ. ಆರಾಧನಾ ಯೋಜನೆಯಲ್ಲಿ ಎಲ್ಲ ಜಿಲ್ಲೆಗಳಿಗೂ
ಸಮಾನ ಹಂಚಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆಯಡಿ 2015-16ರಿಂದ 2017- 18ರ ವರೆಗೆ 61.53 ಕೋಟಿ ಬಿಡುಗಡೆ ಮಾಡಲಾಗಿದ್ದು, 55.78 ಕೋಟಿ ಖರ್ಚಾಗಿದೆ. ಗಿರಿಜನ ಉಪಯೋಜನೆಯಡಿ 8ಕೋಟಿ ರೂ. ಬಿಡುಗಡೆ ಮಾಡಿದ್ದು, 7.20 ಕೋಟಿ ಖರ್ಚಾಗಿದೆ ಎಂದು ಮಾಹಿತಿ ನೀಡಿದರು. ಮುಜರಾಯಿ ದೇವಸ್ಥಾನಕ್ಕೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ
ಮಾಡುತ್ತಿಲ್ಲ ಎಂದು ಸಚಿವರು ಹೇಳುತ್ತಿದ್ದಂತೆ ಶಾಸಕ ಸಿ.ಟಿ. ರವಿ ಮಧ್ಯ ಪ್ರವೇಶಿಸಿದರು.
ಮನೆಗೆ, ಜಾತಿಗೆ, ಊರಿಗೆ, ಕೇರಿಗೆ ಒಂದೊಂದು ದೇವಸ್ಥಾನವಿದೆ. ಮುಜರಾಯಿ ದೇವಸ್ಥಾನಕ್ಕೆ ಬರುವ ಅನುದಾನ ಸಮರ್ಪಕ ಹಂಚಿಕೆಯಾಗುತ್ತಿಲ್ಲ ಎಂದು ಮಾತು ಮುಂದುವರಿಸುತ್ತಾ, ಮುಸ್ಲಿಂ ಎನ್ನುವಷ್ಟರಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಇಂತಹ ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಸಂವಿಧಾನದ ವಿರುದ್ಧವಾಗಿ ಹೋಗಲು ಬಿಡುವುದಿಲ್ಲ ಮತ್ತು ನಿಮಗೆ ಬೇಕಾದಂತೆ ಸದನದ ಒಳಗೆ ರಾಜಕಾರಣ ಮಾಡಲು ಬಿಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಸಿ.ಟಿ. ರವಿ, ಸಭಾಧ್ಯಕ್ಷರೆ, ಬಿ.ಪಿ.ರೈಸ್ ಮಾಡಿಕೊಳ್ಳದೇ ಹೇಳುವುದನ್ನು ಕೇಳಿಸಿಕೊಳ್ಳಿ ಎಂದಾಗ, ಸ್ಪೀಕರ್ ಪ್ರತಿಕ್ರಿಯಿಸಿ, ನನ್ನ ಬಿ.ಪಿ.ಸರಿಯಾಗಿದೆ ಮತ್ತು ಬಿ.ಪಿ.ರೈಸ್ ಮಾಡಿಕೊಳ್ಳುವುದೂ ಇಲ್ಲ. ದೇಗುಲಗಳನ್ನು ಎ,ಬಿ, ಸಿ ವರ್ಗ ಮಾಡಿರುವುದನ್ನು ಕೇಳಿ ದಂಗಾಗಿದ್ದೇನೆ. ಆರಾಧನಾ ಯೋಜನೆಯಡಿ ದೊಡ್ಡ ದೇವಸ್ಥಾನಗಳು
ಬರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಕಳೆದ ಮೂರು ವರ್ಷದಲ್ಲಿ ಅನುದಾನ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯ ಆಗಿದೆ. ದೇಗುಲ ಜೀರ್ಣೋದಾಟಛಿರಕ್ಕೆ ವರ್ಷಕ್ಕೆ 10ರಿಂದ 15 ಸಾವಿರ ರೂ. ಒಂದು ಕ್ಷೇತ್ರಕ್ಕೆ ನೀಡಿದರೆ
ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದರು. ಆಗ ಶಾಸಕ ಎ.ಎಸ್.ನಡಹಳ್ಳಿ ಎದ್ದುನಿಂತು, ದೇವರಿಗೂ ತಾರತಮ್ಯ ಮಾಡುವುದು ಸಲ್ಲ.
ಮುಖ್ಯಮಂತ್ರಿಯವರು ನಿತ್ಯ ದೇವಸ್ಥಾನಕ್ಕೆ ಹೋಗುತ್ತಾರೆ. ಮಾನ್ವಿ ಕ್ಷೇತ್ರದಲ್ಲೂ ತಾರತಮ್ಯ ಆಗಿದೆ ಎಂದು ಹೇಳಿದ ಕೂಡಲೇ ಪ್ರತಿಕ್ರಿಯಿಸಿದ ಸ್ಪೀಕರ್, “ದೇವರಿಗೆ ಈ ಸ್ಥಿತಿ ಬರಬಾರದು’ ಎಲ್ಲರೂ ಒಂದೇ ಎಂದು ಭಾವಿಸಿ ದೊಡ್ಡದೊಡ್ಡ ಸಂಸ್ಥೆಗಳು ನೀಡುವ ಕಾಣಿಕೆಯನ್ನು ಎಲ್ಲ ದೇವರಿಗೂ ಸಮಾನವಾಗಿ ಹಂಚಿಕೆ ಮಾಡುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.