ಚಿಣ್ಣರೇ ಎಳೆಯಲಿದ್ದಾರೆ ಶ್ರೀಕೃಷ್ಣನ ಬ್ರಹ್ಮರಥ
Team Udayavani, May 20, 2019, 3:00 AM IST
ಉಡುಪಿ: ಪರ್ಯಾಯ ಪಲಿಮಾರು ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಚಿಣ್ಣರ ಸಂತರ್ಪಣೆಯ ಶಾಲೆಗಳ 5 ಸಾವಿರ ಪುಟಾಣಿಗಳು ಬ್ರಹ್ಮರಥವನ್ನು ಎಳೆಯಲಿದ್ದಾರೆ.
ಜೂ.3ರಂದು ಈ ದಾಖಲೆಯ ಕಾರ್ಯಕ್ರಮ ನಡೆಯಲಿದೆ. ಅಂದು ಚಿಣ್ಣರು ಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಸಂಜೆ ರಥಬೀದಿಯಲ್ಲಿ ನಡೆಯಲಿರುವ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ 120 ಚಿಣ್ಣರ ಸಂತರ್ಪಣೆಯ ಶಾಲೆಗಳಲ್ಲಿ 15,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ 4ರಿಂದ 7ನೇ ತರಗತಿ ವರೆಗಿನ ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೃಷ್ಣಮಠದ ಸುವರ್ಣ ಗೋಪುರದ ಸಮರ್ಪಣೆಗೆ ಪೂರ್ವಭಾವಿಯಾಗಿ ಜೂ.1ರಂದು ಗರ್ಭಗುಡಿಯ ಸುವರ್ಣ ಲೇಪಿತ ಕಲಶಗಳನ್ನು ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಮಠಕ್ಕೆ ತರಲಾಗುತ್ತದೆ. ಜೂ.6ರಂದು ಸುವರ್ಣ ಗೋಪುರದ ಪ್ರತಿಷ್ಠಾಪನೆ, ಜೂ.9ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ.