ಬಿ.ಎಸ್.ವೈ. ಸರಕಾರದಿಂದ ಹಣ್ಣು, ತರಕಾರಿ ಬೆಳೆಗಳಿಗೆ 137 ಕೋಟಿ ರೂ. ಪರಿಹಾರ ಘೋಷಣೆ
Team Udayavani, May 14, 2020, 7:31 PM IST
ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ತಮ್ಮ ಬೆಳೆಗಳಿಗೆ ಸೂಕ್ತ ಬೇಡಿಕೆ ಹಾಗೂ ಬೆಲೆ ಇಲ್ಲದೆ ಕಂಗಾಲಾಗಿದ್ದ ತರಕಾರಿ ಮತ್ತು ಹಣ್ಣು ಬೆಳೆಗಾರರ ಸಹಾಯಕ್ಕೆ ರಾಜ್ಯ ಸರಕಾರ ಧಾವಿಸಿದೆ.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾದ ಪರಿಹಾರ ಪ್ಯಾಕೇಜ್ ಗೆ ಸಮ್ಮತಿ ನೀಡಲಾಯಿತು. ಈ ಉದ್ದೇಶಕ್ಕಾಗಿ ಒಟ್ಟು 137 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗಿದೆ.
ಇದರಂತೆ ರಾಜ್ಯದಲ್ಲಿ 50,083 ಹೆಕ್ಟೇರ್ ಗಳಲ್ಲಿ ತರಕಾರಿ ಬೆಳೆದ ರೈತರಿಗೆ ಹಾಗೂ 41,054 ಹೆಕ್ಟೇರ್ ಗಳಲ್ಲಿ ಬೆಳೆದ ಹಣ್ಣು ಬೆಳೆಗಾರರಿಗೆ ಪ್ರತೀ ಹೆಕ್ಟೇರ್ ಗೆ 15,000 ರೂಪಾಯಿಗಳಂತೆ ಪರಿಹಾರ ಧನವನ್ನು ವಿತರಿಸಲು ನಿರ್ಧರಿಸಲಾಗಿದೆ.
ಹಣ್ಣಿನ ಬೆಳೆಗಳು: ಬಾಳೆ, ಪಪ್ಪಾಯಿ, ಟೇಬಲ್ ದ್ರಾಕ್ಷಿ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೆಳೆದ ದ್ರಾಕ್ಷಿ ಬೆಳೆಗಳು), ಅಂಜೂರ, ಅನಾನಾಸ್, ಕಲ್ಲಂಗಡಿ ಮತ್ತು ಖರಬೂಜ, ಬೋರೆ ಹಾಗೂ ಬೆಣ್ಣೆ ಹಣ್ಣು.
ತರಕಾರಿ ಬೆಳೆಗಳು: ಟೊಮೆಟೋ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆ ಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪು, ಹೀರೆಕಾಯಿ ಮತ್ತು ತೊಂಡೆಕಾಯಿ.
ಇದರ ಜೊತೆಗೆ ಈ ಹಿಂದೆ ಪ್ಯಾಕೇಜ್ ಘೋಷಣೆ ಮಾಡುವ ಸಂದರ್ಭದಲ್ಲಿ ಪ್ರತೀ ಕೈಮಗ್ಗ ನೇಕಾರರಿಗೆ 2,000 ರೂಪಾಯಿಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಪ್ರಸ್ತುತ ಒಂದು ಬಾರಿಗೆ ಈ ಪರಿಹಾರ ಸೌಲಭ್ಯವನ್ನು ರಾಜ್ಯದಲ್ಲಿರುವ 1.25 ಲಕ್ಷ ವಿದ್ಯುತ್ ಚಾಲಿತ ಘಟಕಗಳಿಗೂ ಸಹ ವಿಸ್ತರಿಸಲು ನಿರ್ಧರಿಸಲಾಗಿದೆ.
ಇದರ ಪ್ರಕಾರ ಪ್ರತೀ ವಿದ್ಯುತ್ ಚಾಲಿತ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಪ್ರತೀ ಕೂಲಿ ಕಾರ್ಮಿಕರಿಗೆ ತಲಾ 2000 ರೂಪಾಯಿಗಳಂತೆ ಒಟ್ಟು 25 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.