ಬಿಎಸ್ವೈ ನಡೆ ಮೇಲೆ ರಾಜ್ಯ ಸರ್ಕಾರದ ಭವಿಷ್ಯ
Team Udayavani, Aug 25, 2019, 3:03 AM IST
ಕಲಾದಗಿ (ಬಾಗಲಕೋಟೆ): ಸಚಿವ ಸಂಪುಟ ರಚನೆ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಿದ್ದು, ಈ ಕುರಿತು ನಾನು ಏನೂ ಹೇಳಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರನ್ನು ಯಾವ ರೀತಿ ನೋಡಿಕೊಳ್ಳುತ್ತಾರೋ ಅದರ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ಅಡಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದರು.
ಚಿಕ್ಕಸಂಶಿಯಲ್ಲಿ ಘಟಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ವಿವಿಧ ಸಾಮಗ್ರಿ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ನಿಂತರೂ ಮಳೆ ಹನಿ ನಿಲ್ಲೋದಿಲ್ಲ. ಹಾಗೆಯೇ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಒಂದಿಷ್ಟು ಮಾತು, ಆರೋಪಗಳು ಇದ್ದೇ ಇರುತ್ತವೆ. ಸ್ವಲ್ಪ ದಿನ ಇದೆಲ್ಲ ಇರುತ್ತದೆ. ಏನೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಹಾಗೂ ದೇವೇಗೌಡರು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದು, ಈ ಕುರಿತು ನಾನು ಏನೂ ಹೇಳಲ್ಲ.
ಆದರೆ, ಸರ್ಕಾರ ಬೀಳಲು ಬೇರೆ, ಬೇರೆ ಕಾರಣಗಳಿವೆ ಎಂದರು. ಈಗಿನ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಸಮುದಾಯಕ್ಕೆ ಒಂದೂ ಸಚಿವ ಸ್ಥಾನ ನೀಡಿಲ್ಲ. ಯಾವುದೇ ಪಕ್ಷದ ಸರ್ಕಾರ ಇರಲಿ. ಸರ್ವ ಸಮುದಾಯದವರನ್ನು ಸಮಾನವಾಗಿ ಕೊಂಡೊಯ್ಯಬೇಕು. ಬಿಜೆಪಿಯಲ್ಲಿ 9 ಜನ ರೆಡ್ಡಿ ಸಮುದಾಯದ ಶಾಸಕರಿದ್ದಾರೆ. ಮುಂದೆ ಏನಾದರೂ ಅವಕಾಶ ಕೊಡುತ್ತಾರೋ ನೋಡೋಣ ಎಂದರು.