ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ
ಪಿ.ಲಕ್ಷ್ಮಣ
Team Udayavani, Mar 12, 2021, 8:17 PM IST
ಮೊಳಕಾಲ್ಮೂರು : ಕ್ರೀಡೆಯಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಕ್ರೀಡಾಮನೋಭಾವವನ್ನು ಅಳವಡಿಸಿ ಕೊಂಡು ಗೆಲುವು ಸಾಧಿಸಬೇಕು ಎಂದು ಪಪಂ ಅಧ್ಯಕ್ಷ ಪಿ.ಲಕ್ಷ್ಮಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಕ್ರೀಡಾಪಟು ದಿ.ರವಿಕುಮಾರ್ ಅವರ ಸ್ಮರಣಾರ್ಥ ಯಂಗ್ ಬಾಯ್ಸ ಕ್ರಿಕೆಟರ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ ಮಾತನಾಡಿ, ಯುವ ಜನತೆಯು ಕ್ರೀಡೆಗಳನ್ನು ಆಡುವ ಮೂಲಕ ಆರೋಗ್ಯವಂತರಾಗಿ ಸದೃಢ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಪ್ರಯೋಜನಕಾರಿಯಾಗಿವೆ. ಯುವ ವಿದ್ಯಾರ್ಥಿಗಳು ನಿಗ ದಿತ ಬಿಡುವಿನ ವೇಳೆಯಲ್ಲಿ ಕ್ರೀಡೆಗಳನ್ನು ಅಭ್ಯಾಸ ಮಾಡಿ ಕ್ರೀಡಾಮನೋಭಾವ ರೂಢಿಸಿಕೊಂಡು ಸ್ಪರ್ಧಿಸಿ ಆಡಿ ಗೆಲುವು ಪಡೆಯಬೇಕು ಎಂದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಕೆ. ಬಸವರಾಜ್ ಮಾತನಾಡಿ, ಯುವ ಜನತೆಯು ಕ್ರೀಡೆಗಳಲ್ಲಿ ಯಶಸ್ಸು ಪಡೆದು ಉನ್ನತ ಹುದ್ದೆಗಳ ಸ್ಥಾನಮಾನ ಪಡೆಯಬಹುದಾಗಿದೆ. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೆ ಕ್ರೀಡೆಯು ಪೂರಕವಾಗಿದ್ದು, ಯುವ ಜನತೆಯು ಕ್ರೀಡೆಗಳಲ್ಲಿ ಸ್ಪ ರ್ಧಿಸಿ ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಗೆಲುವು ಸಾಧಿಸಬೇಕು. ಯುವಕರು ವೇಗಮಿತಿಯೊಂದಿಗೆ ಬೈಕ್ಗಳಲ್ಲಿ ಸಂಚರಿಸಿ ಅಪಘಾತವಾಗದಂತೆ ಜಾಗೃತಿ ವಹಿಸಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ.ಪಂ ಸದಸ್ಯ ಎನ್.ಮಂಜಣ್ಣ, ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ, ಎಸ್ .ಸಿ ಮೋರ್ಚಾಧ್ಯಕ್ಷ ಸಿದ್ಧಾರ್ಥ, ಮುಖಂಡರಾದ ರಘುತಿಲಕ್, ಅರ್ಜುನ, ಭೀಮಣ್ಣ, ರಮೇಶ್ ನಾಯಕ, ಯಂಗ್ ಬಾಯ್ಸ ಕ್ರಿಕೆಟರ್ನ ಮರಿಸ್ವಾಮಿ, ರಘು, ಭೂಮೇಶ್, ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.