ನಿಲ್ಲದ ಹೇಳಿಕೆ ಸಮರ :ಇಂದು ಬೆಂಗಳೂರಿನಲ್ಲಿ ಅತೃಪ್ತರ ಸಭೆ
Team Udayavani, Jan 19, 2021, 6:22 AM IST
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ಅತೃಪ್ತಿಯ ವಿರುದ್ಧ ಸ್ಪಷ್ಟ ಸಂದೇಶ ರವಾ ನಿಸಿದ್ದೇ ಅಲ್ಲದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯ ವೈಖರಿ ಯನ್ನು ಶ್ಲಾ ಸಿದ್ದರೂ ಅತೃಪ್ತರು ಬಹಿರಂಗ ಹೇಳಿಕೆಗಳನ್ನು ನೀಡುವುದು ನಿಂತಿಲ್ಲ.
ರಾಜ್ಯ ರಾಜಕೀಯದಲ್ಲಿ ಏನು ಬೇಕಾ ದರೂ ಆಗಬಹುದು ಎಂದು ಶಾಸಕ ಬಸನಗೌಡ ಯತ್ನಾಳ್ ಕೆಣಕಿದರೆ, ಮಂಗಳವಾರ ಬೆಂಗಳೂರಿನಲ್ಲಿ ಅತೃಪ್ತ ಶಾಸಕರ ಸಭೆ ನಡೆಯಲಿರುವುದಾಗಿ ಶಾಸಕ ರೇಣುಕಾಚಾರ್ಯ ದಾವಣಗೆರೆಯಲ್ಲಿ ಬಹಿರಂಗಹೇಳಿಕೆ ನೀಡಿದ್ದಾರೆ. ಆ ಮೂಲಕ ಪಕ್ಷದಲ್ಲಿ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿ ರುವ ಶಾಸಕರು ಬಂಡಾಯ ಮುಂದು ವರಿಸುವ ಸೂಚನೆ ನೀಡಿದಂತಾಗಿದೆ.
ಅತೃಪ್ತರ ಸಭೆ :
ದಾವಣಗೆರೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಎಂ.ಪಿ. ರೇಣುಕಾಚಾರ್ಯ, ಸಚಿವ ಸ್ಥಾನ ದೊರೆಯದ ಕೆಲವು ಶಾಸಕರು ತನ್ನ ಜತೆ ನೋವು ತೋಡಿಕೊಂಡಿದ್ದಾರೆ. ಹಾಗಾಗಿ ಮಂಗಳವಾರ (ಜ. 19) ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಕೆಲವು ಶಾಸಕರು ನನ್ನ ಜತೆ ನೋವು ತೋಡಿಕೊಂಡಿದ್ದಾರೆ. ನಾಲ್ಕು ಗೋಡೆ ಗಳ ನಡುವೆ ಅವರ ಜೊತೆ ಚರ್ಚೆ ನಡೆಸ ಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.
ಯತ್ನಾಳ್ ಬಾಂಬ್ :
ಹಾವೇರಿಯಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಎರಡೂವರೆ ವರ್ಷ ಬಿಜೆಪಿ ಸರಕಾರ ಇರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಯಡಿಯೂರಪ್ಪನವರೇ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಅವರು ಹೇಳಿಲ್ಲ. ಮಾಧ್ಯಮಗಳು ಶಾ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ ಎಂದರು.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಆಪ್ತರಾಗಿದ್ದಾರೆ. ಅದಕ್ಕಾಗಿಯೇ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು. ಯಡಿಯೂರಪ್ಪ, ಜಾರ್ಜ್, ಜಮೀರ್ ಅಹ್ಮದ್ ಖಾನ್ ಎಲ್ಲರೂ ಬಹಳ ಆಪ್ತರು ಎಂದು ಮಾರ್ಮಿಕವಾಗಿ ಹೇಳಿದರು.
ನಾನು ಸಚಿವ ಸ್ಥಾನ ಕೇಳಿಲ್ಲ. ಯಾವ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲವೋ ಅಂತಹ ಕಡೆಗಳಿಗೆ ಸಚಿವ ಸ್ಥಾನ ಕೊಡಿ ಎಂದು ಹೇಳಿದ್ದೇನೆ. ಸಚಿವ ಸ್ಥಾನ ಕೊಟ್ಟರೂ ನಾನು ತೆಗೆದುಕೊಳ್ಳುವುದಿಲ್ಲ ಎಂದರು.