ರಫೇಲ್ ಡೀಲ್: ಮುಂದೆ JPC ರಚಿಸುತ್ತೇವೆ!; ಚಿದಂಬರಂ ವಿಶ್ವಾಸ
Team Udayavani, Dec 21, 2018, 2:08 PM IST
ಬೆಂಗಳೂರು: ರಫೇಲ್ ಡೀಲ್ ಚರ್ಚೆಗಾಗಿ ಮುಂದಿನ ಸರ್ಕಾರದಲ್ಲಿ ನಿಸ್ಸಂದೇಹವಾಗಿ ನಾವು ಜಂಟಿ ಸಂಸದೀಯ ಸಮಿತಿ ರಚಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ 2019 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಚಿದಂಬರಂ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಆರೋಪ ಮಾಡಿದರು.
ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅವರು ರಫೇಲ್ ವಿಚಾರಕ್ಕೆ ಸಂಬಂಧಿಸಿ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋಹಾ ಅವರನ್ನು ಟೀಕಿಸಿದ್ದ ಬೆನ್ನಲ್ಲೇ ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
ಮೊಯ್ಲಿ ಅವರು ಧನೋಹಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ನಾನು ವೈಯಕ್ತಿಕವಾಗಿ ಸೇನಾ ಮುಖ್ಯಸ್ಥರಿಗೆ ಅಪಾರ ಗೌರವ ನೀಡುತ್ತೇನೆ. ಆದರೆ ಸೇನಾ ಮುಖ್ಯಸ್ಥರು ಈ ಚರ್ಚೆಯಿಂದ ದೂರ ಉಳಿಯಬೇಕು ಎಂದರು.
ನಾವು ರಫೇಲ್ ಕೆಟ್ಟ ವಿಮಾನ ಎಂದು ಹೇಳುತ್ತಿಲ್ಲ.126 ವಿಮಾನಗಳ ಅಗತ್ಯವಿದ್ದಾಗ 36 ವಿಮಾನಗಳನ್ನು ಮಾತ್ರ ಯಾಕೆ ಖರೀದಿ ಮಾಡಿದ್ದು ಎಂದು ವಾಯು ಪಡೆ ಮುಖ್ಯಸ್ಥರು ಪ್ರಶ್ನಿಸಬೇಕಿತ್ತು ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಫೇಲ್ ಒಪ್ಪಂದವು ನೇರ ವಿಚಾರ ಆಗಲಿದೆ ಎಂದ ಚಿದಂಬರಂ ‘ಅಗ್ಗದ ದರಕ್ಕಾಗಿ ಮಾತುಕತೆ ನಡೆಸಿದೆ’ ಎಂದು ಸರ್ಕಾರ ಹೇಳಿದೆ. ಹಾಗಿದ್ದಲ್ಲಿ, ಅವರು ಕೇವಲ 36 ವಿಮಾನಗಳನ್ನು 60,000 ಕೋಟಿಗಳಿಗೆ ಏಕೆ ಖರೀದಿಸುತ್ತಾರೆ ಮತ್ತು ಅದೇ ಮೊತ್ತಕ್ಕೆ 126 ವಿಮಾನಗಳನ್ನು ಖರೀದಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ರಫೇಲ್ ಡೀಲ್ ಕುರಿತಾಗಿ ಪರೀಕ್ಷೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈಗಿನ ಸಂಸತ್ನಲ್ಲಿ ಸಾಧ್ಯವಾಗದಿದ್ದರೆ ಮುಂದಿನ ಸಂಸತ್ನಲ್ಲಿ ರಚಿಸುತ್ತೇವೆ ಎಂದರು.
ವಿಡಿಯೋ: ಫಕ್ರುದ್ದೀನ್