ಹೊಟ್ಟೆ ಮಂಜ ಎಸ್ಐಟಿ ವಶಕ್ಕೆ
Team Udayavani, Mar 10, 2018, 7:30 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ವಿಶೇಷ ತನಿಖಾ ತಂಡ ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ. ಆದರೆ, ಮೊದಲ ಆರೋಪಿ ಈತನಲ್ಲ ಎಂದಿದೆ.
ಎಸ್ಐಟಿ ತಂಡದ ವಶದಲ್ಲಿರುವ ಮದ್ದೂರಿನ ಹೊಟ್ಟೆ ಮಂಜ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ತೀವ್ರಗೊಳಿಸಿದೆ. ಶುಕ್ರವಾರ 3ನೇ ಸಿಸಿಎಚ್ ನ್ಯಾಯಾಲಯಕ್ಕೆ
ಹಾಜರು ಪಡಿಸಿದ ತನಿಖಾ ತಂಡದ ಅಧಿಕಾರಿಗಳು, ಗೌರಿ ಹಂತಕರಿಗೆ ಸಹಾಯ ಮಾಡಿರುವ ಬಗ್ಗೆ ಅನುಮಾನವಿದೆ. ಈತನ ವಿಚಾರಣೆ ಸಂದರ್ಭದಲ್ಲಿ ಕೆಲವೊಂದು ಮಾಹಿತಿ ಲಭ್ಯವಾಗಿದೆ. ಆ ಸಾಕ್ಷ್ಯಗಳು ಹಾಗೂ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ
ಸಲ್ಲಿಸಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ತಿಳಿಸಿದರು. ಹೀಗಾಗಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಕೋರ್ಟ್ ಐದು ದಿನ ವಶಕ್ಕೆ ನೀಡಿ ಆದೇಶಿಸಿದೆ.
ಇದಕ್ಕೂ ಮೊದಲು ನವೀನ್ ಪರ ವಕೀಲರಾದ ವೇದಮೂರ್ತಿ ವಾದ ಮಂಡಿಸಿ, ಒಬ್ಬನೇ ವ್ಯಕ್ತಿಯನ್ನು 20 ದಿನಗಳ ಕಾಲ ವಿಚಾರಣೆ ನಡೆಸಿದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಬೇರೆ ಬೇರೆ ಪ್ರಕರಣಗಳನ್ನು ನವೀನ್ ತಲೆಗೆ ಕಟ್ಟಲು ಹುನ್ನಾರ ನಡೆಸುತ್ತಿದ್ದಾರೆ. ಹೀಗಾಗಿ
ನವೀನ್ನನ್ನು ಪೊಲೀಸ್ ವಶಕ್ಕೆ ನೀಡಬಾರದು. ವಿಚಾರಣೆ ನೆಪದಲ್ಲಿ ಹಿಂಸೆ ನೀಡುವ ಬದಲು ಗುಂಡು ಹಾರಿಸಿ ಬಿಡಿ ಎಂದು ಕೋರ್ಟ್ ಆವರಣದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರಾದ ನಿರ್ಮಲಾ ರಾಣಿ, ನ್ಯಾಯಾಧೀಶರ ಮುಂದೆ ಆರೋಪಿ ಎಲ್ಲವನ್ನೂ ಹೇಳಿಕೆ
ನೀಡಿದ್ದಾನೆ. ಇದರ ಆಡಿಯೋ-ವಿಡಿಯೋವನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಸಿಆರ್ಪಿಸಿ 164 ಅಡಿ ಆರೋಪಿಯ ಹೇಳಿಕೆ ದಾಖಲಿಸಲಾಗಿದೆ. ಹಾಗೆಯೇ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಆರೋಪಿಯನ್ನು ಗೋವಾ, ಬೆಳಗಾವಿಗೆ ಕರೆದೊಯ್ದು ವಿಚಾರಣೆ ನಡೆಸಬೇಕು. ನವೀನ್ಕುಮಾರ್ ಭಗವಾನ್ ಹತ್ಯೆಗೆ ಯತ್ನಿಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಒಂದು ವೇಳೆ ಈ
ಆರೋಪಕ್ಕೆ ಸಾಕ್ಷ್ಯ ಲಭ್ಯವಾದರೆ ಪ್ರಕರಣವನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗುವುದು. ಒಟ್ಟಾರೆ ನವೀನ್ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಹೀಗಾಗಿ ಈ ಪ್ರಕರಣಗಳ ಸಾಕ್ಷ್ಯಗಳು ಸೂಕ್ಷ್ಮವಾದ್ದರಿಂದ ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಸುಳ್ಳು ಪತ್ತೆ ಪರೀಕ್ಷೆಗೆ ಮನವಿ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಆರೋಪಿ ನವೀನ್ ಕುಮಾರ್ನನ್ನು “ಸುಳ್ಳು ಪತ್ತೆ ಪರೀಕ್ಷೆ’ ಗೆ ಒಳಪಡಿಸಲು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿ ತನಿಖೆಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಗಂಟೆಗೊಮ್ಮೆ ಹೇಳಿಕೆ ನೀಡುತ್ತಿದ್ದಾನೆ. ಹೀಗಾಗಿ ನವೀನ್ನ ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಿಸಿದ್ದು, ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪರೀಕ್ಷೆ ಅನುಮತಿ ನೀಡುವ ಕುರಿತು ಮಾ.15ಕ್ಕೆ ತೀರ್ಪು ಕಾಯ್ದಿರಿಸಿದೆ.
ನವೀನ್ಗೆ ಜಾಮೀನು: ನವೀನ್ ಕುಮಾರ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ 5ನೇ ಎಸಿಎಂಎಂ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರು ಶುಕ್ರವಾರ ಜಾಮೀನು ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರು ಹಾಗೂ ಆರೋಪಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೊದಲ ಆರೋಪಿಯಲ್ಲ ಹಿಂದೂ ಪರ ಘಟನೆಯೊಂದರಲ್ಲಿ ನವೀನ್ ಗುರುತಿಸಿಕೊಂಡಿದ್ದಾನೆ. ಅಲ್ಲದೇ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜತೆ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಿಂದ
ಬೆಳಕಿಗೆ ಬಂದಿದೆ. ತನ್ಮೂಲಕ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದೇವೆ. ಆದರೆ, ಪ್ರಕರಣದ ಮೊದಲ ಆರೋಪಿ ನವೀನ್ ಕುಮಾರ್ ಅಲ್ಲ. ದೋಷಾರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲಿ ಎಷ್ಟನೇ ಆರೋಪಿ ಎಂಬುದನ್ನು ಉಲ್ಲೇಖೀಸಲಾಗುತ್ತದೆ. ಜಾಮೀನು ನೀಡಿ ರುವ ಪ್ರಕಣದಲ್ಲಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ