ಪಿಡಿಒಗಳ ವಾಪಸಾತಿಗೆ ಕಟ್ಟುನಿಟ್ಟಿನ ಆದೇಶ
Team Udayavani, Dec 19, 2018, 8:28 AM IST
ವಿಧಾನಪರಿಷತ್ತು: ವಿವಿಧ ಕಡೆ ನಿಯೋಜನೆ ಮೇಲೆ ಹೋಗಿರುವ ಸುಮಾರು 1,500 ಪಿಡಿಒಗಳನ್ನು ಮಾತೃ ಸಂಸ್ಥೆಗೆ ಕರೆಯಿಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಅನೇಕ ಶಾಸಕರಿಂದ ಇಂತಹ ಕ್ರಮ ಬೇಡವೆಂಬ ಒತ್ತಡ ನನ್ನ ಮೇಲಿದೆ.
ಶಿಸ್ತು ತರಲು ಹೋದರೆ ಇಂತಹ ಸ್ಥಿತಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಬಿ.ಜಿ.ಪಾಟೀಲ, ಎಂ.ಕೆ.ಪ್ರಾಣೇಶ, ಎಂ.ಪಿ.ಸುನೀಲ್ ಸುಬ್ರಮಣಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬೇರೆ ಇಲಾಖೆಗಳಿಗೆ ಹೋಲಿಸಿದರೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ.90-96ರಷ್ಟು ಪಿಡಿಒಗಳ ಹುದ್ದೆಗಳು ಭರ್ತಿಯಾಗಿವೆ. ಆದರೆ, 1,500ಕ್ಕೂ ಹೆಚ್ಚು ಪಿಡಿಒಗಳು ನಿಯೋಜನೆ ಮೇಲೆ ತಾಪಂ, ಜಿಪಂಗೆ ಹೋಗಿದ್ದಾರೆ. ಇನ್ನು ಕೆಲವರು ಇಲಾಖೆ ಅನುಮತಿ ಪಡೆದು ಶಾಸಕರು, ಸಂಸದರ ಆಪ್ತಕಾರ್ಯದರ್ಶಿ ಇನ್ನಿತರ ಸೇವೆಗೆ ಹೋಗಿದ್ದಾರೆ. ನಿಯೋಜನೆ ಮೇಲೆ ಹೋದ 1,500 ಪಿಡಿಒಗಳನ್ನು ಕರೆಸಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ ಎಂದರು.
90-95ಲಕ್ಷ ಸೇವೆ ನೀಡಿಕೆ: ರಾಜ್ಯಾದ್ಯಂತ ಬಹುತೇಕ ಗ್ರಾಮ ಪಂಚಾಯತ್ಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಉತ್ತಮವಾಗಿ
ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಒಟ್ಟಾರೆ 90-95ಲಕ್ಷದಷ್ಟು ಸೇವೆಗಳನ್ನು ವಿವಿಧ ಫಲಾನುಭವಿಗಳಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದರು. 2016ರಿಂದ ಆರಂಭವಾದ ಬಾಪೂಜಿ
ಸೇವಾಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ 43, ಕಂದಾಯ ಇಲಾಖೆಯ 40, ವಾಣಿಜ್ಯ ಉದ್ದೇಶ 17 ಸೇರಿದಂತೆ ಒಟ್ಟು 100 ಸೇವೆಗಳನ್ನು ನೀಡಲಾಗುತ್ತಿದೆ. ಸುಮಾರು 37.57ಲಕ್ಷ ಫಲಾನುಭವಿಗಳಿಗೆ ಪಹಣಿ ಪತ್ರ ನೀಡಲಾಗಿದ್ದು, ನಾಡ ಕಚೇರಿ ಸೇವೆಗಳನ್ನು 1.11ಲಕ್ಷ ಜನರು ಪಡೆದಿದ್ದಾರೆ. ಅನಿಲ ಭಾಗ್ಯದಡಿ 3.25ಲಕ್ಷ ಜನರಿಗೆ, ಗ್ರಾಮೀಣಾಭಿವೃದ್ಧಿ ,ಪಂಚಾಯತ್ ರಾಜ್ ಇಲಾಖೆಯಡಿ 49.22ಲಕ್ಷ ಸೇವೆಗಳನ್ನು ನೀಡಲಾಗಿದೆ. ಸೇವೆಗೆ 10 ರೂ. ಶುಲ್ಕ ಪಡೆಯಲಾಗುತ್ತಿದ್ದು, ಇದರಲ್ಲಿ 5 ರೂ. ಗ್ರಾಪಂಗೆ ನೀಡಲಾಗುತ್ತಿದ್ದು, ಉಳಿದ ಹಣ ಭೂಮಿ ಯೋಜನೆ ನಿರ್ವಹಣೆಗೆ ಹೋಗುತ್ತದೆ.
ಬಾಪೂಜಿ ಕೇಂದ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿ
ಸೇವೆ ಹಾಗೂ ಸವಲತ್ತುಗಳಿಗೆ ಸಂಗ್ರಹವಾಗುವ ಆದಾಯದ ಹಣವನ್ನು ವೆಚ್ಚ ಮಾಡಲು ಗ್ರಾಪಂಗಳು ಮುಂದಾಗಬೇಕು . ಸಂಗ್ರಹವಾದ ಹಣದ ವೆಚ್ಚದ ಬಗ್ಗೆ ಸರಳ ಮಾರ್ಗಸೂಚಿ ಆದೇಶ ಒಂದೆರಡು ದಿನಗಳಲ್ಲಿ ಹೊರಡಿಸಲಾಗುವುದು ಎಂದರು.
ಪಿಡಿಒಗಳಿಗೆ ಬಿ ದರ್ಜೆ ಹುದ್ದೆ ನೀಡಬೇಕೆಂಬ ಬೇಡಿಕೆ ಪ್ರತ್ಯೇಕ ವಿಚಾರವಾಗಿದ್ದು, ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಸಿಬ್ಬಂದಿ ಕಾಯಂ ಬೇಡಿಕೆ ಬಗ್ಗೆ ಬೇಡಿಕೆ ಇದೆ. ಈಗಾಗಲೇ ಅವರಿಗೆ ಸರ್ಕಾರದಿಂದ ನೇರ ವೇತನ ಪಾವತಿ ಆಗುತ್ತಿದೆ. ಅತಿ ಹೆಚ್ಚು ಸೇವೆ ನೀಡುವ, ಆರ್ಥಿಕ ಶಿಸ್ತು ಹೊಂದಿದ ಗ್ರಾಪಂಗಳಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಡಾಟಾ ಎಂಟ್ರಿ ಸಿಬ್ಬಂದಿ ನೇಮಕಕ್ಕೆ ಸರ್ಕಾರದಿಂದ ಅಭ್ಯಂತರವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಶೇ.99 ಶೌಚಾಲಯ ನಿರ್ಮಾಣ ಪೂರ್ಣ
ವಿಧಾನಪರಿಷತ್ತು: ಗ್ರಾಮೀಣ ಕರ್ನಾಟಕದಲ್ಲಿ ಜನವರಿ ಅಂತ್ಯಕ್ಕೆ ಶೇ.99ರಷ್ಟು ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು,
ಶೌಚಾಲಯ ಬಳಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ , ಪಂಚಾಯತ್
ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎನ್. ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಮಲ ಭಾರತ ಯೋಜನೆಯಡಿ 2012-13ರ ಬೇಸ್ಲೈನ್ ಸಮೀಕ್ಷೆಯಡಿ ರಾಜ್ಯದಲ್ಲಿ ಸುಮಾರು 45.42 ಕುಟುಂಬಗಳಿಗೆ ಶೌಚಾಲಯ ಇಲ್ಲ ಎಂಬ ಮಾಹಿತಿ ಲಭ್ಯವಾ ಗಿತ್ತು. ಸ್ವಚ್ಛ ಭಾರತ ಅಭಿಯಾ ನದಡಿ 4,207 ಕೋಟಿ ರೂ.ವೆಚ್ಚದಲ್ಲಿ 45.42ಲಕ್ಷ ಶೌಚಾಲಯ ನಿರ್ಮಾಣ ಕಾರ್ಯ
ಪೂರ್ಣಗೊಳಿಸಲಾಗಿದೆ ಎಂದರು.