ಕೃಷಿಯಲ್ಲಿ ಯಶಸ್ಸು ಸುಲಭದ ಕಾರ್ಯವಲ್ಲ: ಪೇಜಾವರ ಶ್ರೀ
ಬೆಂಗಳೂರಿನ ತುಳುಕೂಟದಿಂದ ಹೊಸಅಕ್ಕಿ ಊಟ
Team Udayavani, Dec 6, 2021, 5:00 AM IST
ಬೆಂಗಳೂರು: ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಫಸಲು ತೆಗೆಯುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ತನ್ನ ಅಮೂಲ್ಯವಾದ ಸಮಯವನ್ನು ಕೃಷಿ ಮೀಸಲಿಟ್ಟಿರುವ ರೈತರಿಗೆ ಅನ್ನದ ಬೆಲೆ ಸರಿಯಾಗಿ ಗೊತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.
ಬೆಂಗಳೂರು ತುಳುಕೂಟದ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ತುಳುನಾಡಿನ ಪಾರಂಪರಿಕ ಆಚರಣೆ “ಹೊಸ ಅಕ್ಕಿ ಊಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್, ಉಡುಪಿಯಲ್ಲಿ ಹಡಿಲು ಬಿಟ್ಟ ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದೆ. ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿ ಕೃಷಿಯಲ್ಲಿ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿ ಉಡುಪಿ ಕೇದಾರ ಕಜೆ ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದರು.
ಇದನ್ನೂ ಓದಿ:ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್!
ಎಂಆರ್ಜಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ಶೆಟ್ಟಿ ಕೆ. ಅವರು ತುಳುಕೂಟದ 50 ವರ್ಷದ ಲಾಂಛನ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತುಳುಕೂಟದ ವೆಬ್ಸೈಟ್ ಅನ್ನು ಅನಾವರಣಗೊಳಿಸಿದರು.
ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ, ತುಳುಕೂಟದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.