ಜಮಖಂಡಿ ಸಂತೆಗೆ ಬಂದ ಸುಧಾಮೂರ್ತಿ!
Team Udayavani, Feb 3, 2020, 3:06 AM IST
ಜಮಖಂಡಿ: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಭಾನುವಾರ ನಗರದ ಸಂತೆಗೆ ಆಗಮಿಸಿ ತರಕಾರಿ ಸಹಿತ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಗಮನಸೆಳೆದರು. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಹುಟ್ಟಿ ಬೆಳೆದ ಸುಧಾಮೂರ್ತಿ, ತಮ್ಮ ಮನೆ ದೇವರು ಶೂರ್ಪಾಲಿ ಉಗ್ರನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬಳಿಕ ನಗರದ ಕಡಪಟ್ಟಿ ಕ್ರಾಸ್ ಬಳಿ ಹಳ್ಳಿ ರೈತರು ಮಾರಾಟ ಮಾಡುವ ತಾಜಾ ತರಕಾರಿ ಖರೀದಿ ಮಾಡಿದರು. ಸುಧಾಮೂರ್ತಿ ಅವರು ತಮ್ಮ ತವರು ಮನೆಗೆ ಬಂದಾಗೊಮ್ಮೆ ಇಲ್ಲಿನ ತರಕಾರಿ, ಸಾವಯವ ಬೆಲ್ಲ, ಸಾಂಬಾರು ಪದಾರ್ಥ ಖರೀದಿಸಿ ಬೆಂಗಳೂರಿಗೆ ಕೊಂಡೊಯ್ಯುತ್ತಾರೆ. ಭಾನುವಾರ ಕೂಡ ಅಳಿಯ ನಾರಾಯಣ ಕುಲಕರ್ಣಿ ಅವರೊಂದಿಗೆ ಸಂತೆಗೆ ಬಂದ ಅವರು, ರೈತರೊಂದಿಗೆ ಯಾವುದೇ ಚೌಕಾಸಿ ಮಾಡದೇ ವಿವಿಧ ವಸ್ತುಗಳನ್ನು ಖರೀದಿಸಿದರು.
ಸುಧಾಮೂರ್ತಿ ಅವರು ಜಮಖಂಡಿಗೆ ಬಂದಾಗೊಮ್ಮೆ ನಾನೇ ತರಕಾರಿ ಸಹಿತ ವಿವಿಧ ವಸ್ತುಗಳನ್ನು ಖರೀದಿಸಿ ತಂದು ಕೊಡುತ್ತಿದ್ದೆ. ಈ ಬಾರಿ ನಾನೇ ಸ್ವತಃ ಸಂತೆಗೆ ಬಂದು ಈಚೆಗೆ ಬಂದ ಪ್ರವಾಹದಿಂದ ರೈತರು ಅನುಭವಿಸಿದ ಕಷ್ಟ ಕೇಳಬೇಕು. ಅವರೊಂದಿಗೆ ಬೆರೆಯಬೇಕು ಎಂದು ಅವರೇ ಸಂತೆಗೆ ಬಂದರು.
ಕೋಟಿ ಕೋಟಿ ಒಡೆಯರಾದರೂ ಅವರು ಅತ್ಯಂತ ಸರಳವಾಗಿ ಇರುತ್ತಾರೆ. ಇಂದು ಸಂತೆಯಲ್ಲಿ ರೈತರು, ರೈತ ಮಹಿಳೆಯರು, ವ್ಯಾಪಾರಸ್ಥರೊಂ ದಿಗೆ ಅವರ ಕಷ್ಟ-ಸುಖ ಕೇಳುತ್ತ ವ್ಯಾಪಾರ ಮಾಡಿದರು. ಅವರು ಈ ರೀತಿ ಸಂತೆಗೆ ಬಂದು ವ್ಯಾಪಾರ ಮಾಡುತ್ತಿರುವುದನ್ನು ಕಂಡ ಹಲವರು ಆಶ್ಚರ್ಯ ವ್ಯಕ್ತಪಡಿಸಿ, ಅವರ ಸರಳತೆಗೆ ಸಂತಸಗೊಂಡರು ಎಂದು ನಾರಾಯಣ ಕುಲಕರ್ಣಿ ತಿಳಿಸಿದರು.