ಹುತಾತ್ಮ ಯೋಧನ ಕುಟುಂಬಕ್ಕೆ ಭೂಮಿ ನೀಡಿದ ಸುಮಲತಾ
Team Udayavani, Feb 16, 2019, 9:57 AM IST
ಮಂಡ್ಯ: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 42 ಜನ ಯೋಧರಲ್ಲಿ ಒಬ್ಬರಾಗಿರುವ ಮಂಡ್ಯದ ಯೋಧ ಹೆಚ್. ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಮೀನನ್ನು ಸುಮಲತಾ ಅವರು ಗೌರವಪೂರ್ವಕ ಕೊಡುಗೆಯಾಗಿ ನೀಡಿ ದೇಶಪ್ರೇಮವನ್ನು ಮೆರೆದಿದ್ದಾರೆ. ಪ್ರಾರಂಭದಲ್ಲಿ ಹುತಾತ್ಮ ಯೋಧ ಗುರುವಿನ ಸ್ಮಾರಕ ನಿರ್ಮಾಣಕ್ಕಾಗಿ ಈ ಜಾಗವನ್ನು ನೀಡುತ್ತಿರುವುದಾಗಿ ಸುಮಲತಾ ಅವರು ತಿಳಿಸಿದ್ದರು. ಆದರೆ ಸರಕಾರಾದ ನೇತೃತ್ವದಲ್ಲೇ ಅಂತ್ಯಸಂಸ್ಕಾರ ನಡೆಯುತ್ತಿರುವ ಕಾರಣ ಇದೀಗ ತಮ್ಮ ಕುಟುಂಬ ನೀಡಿದ ಈ ಭೂಮಿಯನ್ನು ಹುತಾತ್ಮ ಯೋಧನ ಕುಟುಂಬದವರ ಜೀವನ ನಿರ್ವಹಣೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಿ ಎಂದು ಸುಮಲತಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಉತ್ತಮ ನೀರಾವರಿ ಜಮೀನಾಗಿದ್ದು ಇದರಲ್ಲಿ ಕೃಷಿ ಕಾರ್ಯಗಳಿಗೆ ಇದು ಸೂಕ್ತವಾಗಿದೆ. ಈ ವಿಚಾರವಾಗಿ ಮಲೇಷ್ಯಾದಿಂದ ವಿಡಿಯೋ ಮೂಲಕ ಮಾತನಾಡಿದ ಸುಮಲತಾ ಅವರು, ‘ಈ ರೀತಿ ಭೂಮಿಯನ್ನು ನೀಡುವ ಮೂಲಕ ನಾವೇನೂ ಮಹತ್ತರವಾದ ಕೆಲಸವನ್ನು ಮಾಡುತ್ತಿಲ್ಲ ; ಬದಲಾಗಿ ದೇಶ ಕಾಯುವ ನಮ್ಮೂರ ಯೋಧರಿಗೆ ನಾವು ಸಲ್ಲಿಸುವ ಗೌರವವಷ್ಟೇ, ಇದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಅಂಬರೀಷ್ ಅವರಿಂದು ಇರುತ್ತಿದ್ದರೆ ಇದಕ್ಕಿಂತ ಹೆಚ್ಚಿನ ಸಹಾಯವನ್ನು ಕುಟುಂಬ ವರ್ಗದವರಿಗೆ ನೀಡುತ್ತಿದ್ದರು…’ ಎಂದು ಸುಮಲತಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸದ್ಯ ತಾನೀಗ ಮಲೇಷ್ಯಾದಲ್ಲಿದ್ದು ತಕ್ಷಣವೇ ಭೂಮಿಯನ್ನು ಹುತಾತ್ಮ ಯೋಧ ಗುರುವಿನ ಕುಟುಂಬದವರ ಹೆಸರಿಗೆ ನೋಂದಣಿ ಮಾಡಿಸುವಂತೆ ಅಂಬರೀಷ್ ಅವರ ಅಣ್ಣನ ಮಗ ಮದನ್ ಅವರಿಗೆ ಸೂಕ್ತ ಸೂಚನೆಯನ್ನು ಕೊಟ್ಟಿದ್ದೇನೆ ಎಂದವರು ತಿಳಿಸಿದರು.