ಸುಮಲತಾ ಮಣ್ಣಿನ ಮಗಳು: ಶೋಭಾ ಕರಂದ್ಲಾಜೆ
Team Udayavani, Mar 26, 2019, 6:00 AM IST
ಬೆಂಗಳೂರು: ಸುಮಲತಾ ಅವರು ಮಂಡ್ಯದ ಗಂಡು ಮಗಳು. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನರು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆಂಬ ಕಾರಣಕ್ಕೆ ಟೀಕೆ ಮಾಡುವುದು ಶೋಭೆ ತರುವುದಿಲ್ಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಟರಾದ ದರ್ಶನ್, ಯಶ್ ಬಗ್ಗೆ ಮುಖ್ಯಮಂತ್ರಿಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಅಭ್ಯರ್ಥಿಯಾಗಿದ್ದರೂ ರಾಜಕೀಯವಾಗಿ ಎದುರಿಸಬೇಕು. ಅಂಬರೀಶ್ ಅವರಿಗೆ ಗೌರವ ನೀಡುವುದಾದರೆ ಎಲ್ಲ ಪಕ್ಷದವರು ನಾಮಪತ್ರ ವಾಪಸ್ ಪಡೆದು ಸುಮಲತಾ ಅವರಿಗೆ ಬೆಂಬಲ ನೀಡಲಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ “ಬಿ’ ಫಾರಂ ಪಡೆದ ಬಳಿಕ ಪ್ರತಿಕ್ರಿಯಿಸಿದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಕಿತ್ತಾಟದಲ್ಲೇ ಮುಳುಗಿದೆ. ರಾಜ್ಯ ಸರ್ಕಾರದ ಸಾಧನೆ ಶೂನ್ಯ. ರಾಜ್ಯದ ಜನತೆ ಹೆಚ್ಚು ಬಿಜೆಪಿ ಸಂಸದರನ್ನು ಆರಿಸಿ ಕಳುಹಿಸಲಿದ್ದಾರೆ ಎಂದರು. ಮಂಗಳವಾರ ನಾಮಪತ್ರ ಸಲ್ಲಿಸಲಿದ್ದೇನೆ. ಚುನಾವಣೆ ಒಂದು ಯುದ್ದ. ಯಾರೇ ಬಂದರೂ ಎದುರಿಸಬೇಕು. ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಅವರು ಸ್ಪರ್ಧಿಸಿದರೂ ಖುಷಿಯಿಂದಲೇ ಚುನಾವಣೆ ಎದುರಿಸುತ್ತೇನೆ. ಜಯಪ್ರಕಾಶ್ ಹೆಗ್ಡೆ ಅವರೂ ನಮ್ಮ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.