ಸ್ಥಾನಮಾನಕ್ಕೆ ಪ್ರತಿಭಟಿಸಿದ್ದಕ್ಕೆ ಅಮಾನತು ಶಿಕ್ಷೆ
Team Udayavani, Jul 2, 2019, 3:00 AM IST
ಬೆಂಗಳೂರು: ಜೆಡಿಎಸ್ ಕಚೇರಿಯಲ್ಲಿ ಭಾನುವಾರ ದೇವೇಗೌಡರ ಸಮ್ಮುಖದಲ್ಲಿ ನಿಗಮ -ಮಂಡಳಿ ಸ್ಥಾನಮಾನಕ್ಕಾಗಿ ಒತ್ತಾಯಿಸಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಆವರನ್ನು ಅಡ್ಡಹಾಕಿ ಪ್ರತಿಭಟಿಸಿದ ಕೆ.ಎಚ್.ಕುಮಾರ್ ಎಂಬುವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
“ನಿಮ್ಮ ವರ್ತನೆ ಪಕ್ಷದ ಘನತೆಗೆ ಕುಂದುಂಟು ಮಾಡುವ ಹಾಗೂ ನಾಯಕರಿಗೆ ಕೆಟ್ಟ ಹೆಸರು ತರುವ ಯತ್ನ ಎಂದು ಭಾವಿಸಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಏಳು ದಿನದ ಒಳಗೆ ಘಟನೆ ಸಂಬಂಧ ಲಿಖೀತವಾಗಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದ ಉಚ್ಚಾಟಿಸಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ.
ಕೆ.ಎಚ್.ಕುಮಾರ್ ಜೆಡಿಎಸ್ನ ಸಾಂಸ್ಕೃತಿಕ ಘಟಕದ ಪದಾಧಿಕಾರಿಯಾಗಿದ್ದರು. ಭಾನುವಾರ ದೇವೇಗೌಡರ ಸಮ್ಮುಖದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ನಿಗಮ ಮಂಡಳಿ ಸ್ಥಾನಮಾನ ಕೊಡಿ, ಪಕ್ಷಕ್ಕೆ ಸೇವೆ ಸಲ್ಲಿಸಿದವರನ್ನು ಬಿಟ್ಟು ಬೇರೆಯವರಿಗೆ ಕೊಡಲಾಗುತ್ತಿದೆ.
ಇದು ಸರಿಯೇ ಎಂದು ಪ್ರಶ್ನಿಸಿದ್ದರು. ಜತೆಗೆ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಅವರನ್ನು ಅಡ್ಡಹಾಕಿ ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದ್ದಾರೆ.