ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಜೆ.ಯು.ಪ್ರಭು ನಿಧನ
Team Udayavani, Oct 28, 2018, 6:00 AM IST
ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾಗಿದ್ದ ಉಡುಪಿಯ ಅಲೆವೂರು ಮೂಲದ ಜೆ.ಯು.ಪ್ರಭು(86) ಅವರು ಶನಿವಾರ ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ವಯೋಸಹಜ ಸಮಸ್ಯೆಯಿಂ ದ ಬಳಲುತ್ತಿದ್ದ ಜೆ.ಯು.ಪ್ರಭು ಅವರ ಆರೋಗ್ಯದಲ್ಲಿ ಎರಡು ತಿಂಗಳಿಂದ ಏರುಪೇರಾಗಿತ್ತು. ಶನಿವಾರ ಮಧ್ಯಾಹ್ನ 3.30ರ ವೇಳೆಗೆ ಸಹಕಾರನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರಭು ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 10 ಗಂಟೆಗೆ ಹೆಬ್ಟಾಳದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಂಡಿಕೇಟ್ ಬ್ಯಾಂಕ್ನಲ್ಲಿ ವೃತ್ತಿ ಆರಂಭಿಸಿ, ಸಿಂಡಿಕೇಟ್ ಬ್ಯಾಂಕ್ನ ಬೆಂಗಳೂರಿನ ಶಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಜೆ.ಯು.ಪ್ರಭು ಅವರು, ವಿವಿಧ ಉನ್ನತ ಹುದ್ದೆ ಅಲಂಕರಿಸಿದ್ದರು. ನಂತರ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ಪಡೆದು ಮಣಿಪಾಲದಲ್ಲಿ
ಸೇವೆ ಸಲ್ಲಿಸಿದ್ದರು. ಸಿಂಡಿಕೇಟ್ ಬ್ಯಾಂಕ್ನ ಮಂಡಳಿ ನಿರ್ದೇಶಕರಾಗಿಯೂ ಕೆಲ ವರ್ಷ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಸದಾ ಕ್ರಿಯಾಶೀಲರಾಗಿದ್ದ ಅವರು, ವಿವಿಧ ಸಮಾಜಮುಖೀ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.