ವಿಶ್ವನಾಥ್ಗೆ ಬಳಲಿಕೆ ವಿಶ್ರಾಂತಿಗೆ ವೈದ್ಯರ ಸಲಹೆ
Team Udayavani, Mar 17, 2019, 12:31 AM IST
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಬಳಲಿಕೆಯಿಂದಾಗಿ ಸುಸ್ತು ಕಾಣಿಸಿಕೊಂಡಿದ್ದು, ಹೈದರಾಬಾದ್ನ ಓಝೋನ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕುರುಬ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್ಗೆ ತೆರಳಿದ್ದ ವಿಶ್ವನಾಥ್ಗೆ ಶುಕ್ರವಾರ ಸಂಜೆ ಸ್ವಲ್ಪ ಸುಸ್ತು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ತಪಾಸಣೆ ಮಾಡಿಸಿಕೊಂಡರು. ನಂತರ ವೈದ್ಯರು ವಿಶ್ರಾಂತಿಗೆ ಸೂಚಿಸಿದರು. ಆದರೆ, ಕೆಲವು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಶ್ವನಾಥ್ ಅವರಿಗೆ ಲಘು ಹೃದಯಾಘಾತವಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಸಿ.ಎನ್.ಮಂಜುನಾಥ್ ಅವರು ಹೈದರಾಬಾದ್ ಆಸ್ಪತ್ರೆ ವೈದ್ಯರ ಜತೆ ಸಂಪರ್ಕದಲ್ಲಿದ್ದಾರೆ ಎಂದು ಸುದ್ದಿ ಬಿತ್ತರವಾಗಿ ಅವರ ಅಭಿಮಾನಿಗಳು ಆತಂಕಗೊಂಡರು.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಎಚ್.ವಿಶ್ವನಾಥ್, “ಬಳಲಿಕೆಯಿಂದ ಸುಸ್ತು ಉಂಟಾಗಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿ ತಪಾಸಣೆ ಮಾಡಿಸಿಕೊಂಡೆ. ಈಗ ಬೆಂಗಳೂರಿಗೆ ವಿಮಾನದಲ್ಲಿ ಹೊರಟು ಬರುತ್ತಿದ್ದೇನೆ. ಆತಂಕ ಪಡುವ ವಿಚಾರವೇನೂ ಇಲ್ಲ. ನಾನು ಆರೋಗ್ಯವಾಗಿದ್ದೇನೆ’ ಎಂದರು.