ಶಿಕ್ಷಕರ ಆರ್ಥಿಕ ಪ್ಯಾಕೇಜ್ ಬಿಡುಗಡೆ
Team Udayavani, Aug 2, 2021, 6:54 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬಂದಿಗೆ ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜ್ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1,72,945 ಶಿಕ್ಷಕರು ಮತ್ತು 34,000 ಸಿಬಂದಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟಾರೆಯಾಗಿ 103.47 ಕೋಟಿ ರೂ. ಬಿಡುಗಡೆ ಮಾಡಿದೆ. ಅರ್ಹ ಪಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
ತಾಲೂಕು, ಬ್ಲಾಕ್ ಹಂತದಲ್ಲಿ ಎಸ್ಎಟಿಎಸ್ ತಂತ್ರಾಂಶದ ಮೂಲಕ ಲಾಗಿನ್ ಆಗಿ ಶೇ. 100 ಪರಿಶೀಲಿಸಿ ದೃಢೀಕರಿಸುವ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇರಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬಿಇಒಗಳಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಕರು, ಸಿಬಂದಿಗಳ ಮಾಹಿತಿಯನ್ನು ಎಸ್ಎಟಿಎಸ್ನಲ್ಲಿ ಇಂದೀಕರಿಸುವ ಜವಾಬ್ದಾರಿ ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ನೀಡಿದ್ದು, ಈ ಕಾರ್ಯವನ್ನು ಆ.3ರೊಳಗೆ ಮುಕ್ತಾಯಗೊಳಿಸಬೇಕಿದೆ. ಅದೇ ರೀತಿ ಮುಖ್ಯಶಿಕ್ಷಕರು ನೀಡುವ ವಿವರಗಳನ್ನು ಪರಿಶೀಲಿಸಿ ಅನುಮೋದಿಸಲು ಬಿಇಒಗಳಿಗೆ ಆ.6ರವರೆಗೆ ಅವಕಾಶ ನೀಡಿದೆ.