ಸುಸೂತ್ರವಾಗಿ ನಡೆದ 2ನೇ ಸುತ್ತಿನ ನೀಟ್ ಪರೀಕ್ಷೆ
Team Udayavani, May 21, 2019, 6:08 AM IST
ಬೆಂಗಳೂರು: ಮೇ 5ರಂದು ನೀಟ್ ಪರೀಕ್ಷೆ ವಂಚಿತರಾದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸೋಮವಾರ (ಮೇ 20) ಬೆಂಗಳೂರಿನ ವಿವಿಧೆಡೆ ಎರಡನೇ ಸುತ್ತಿನ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಮೊದಲ ಸುತ್ತಿನ ನೀಟ್ ಪರೀಕ್ಷೆಯಲ್ಲಿ ರೈಲು ವಿಳಂಬ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ವಂಚಿತರಾಗಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ, ಆ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈ ಎರಡನೇ ಸುತ್ತಿನ ಪರೀಕ್ಷೆಗೆ 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಸುಮಾರು 80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನು ಹಿಂದಿನ ಪರೀಕ್ಷೆ ಸಮಯದಲ್ಲಾಗಿದ್ದ ಸಮಸ್ಯೆ ಮತ್ತೂಮ್ಮೆ ಸಂಭವಿಸುವುದು ಬೇಡ ಎಂದು ಬಹುತೇಕ ವಿದ್ಯಾರ್ಥಿಗಳು ಭಾನುವಾರವೇ ನಗರಕ್ಕೆ ಬಂದಿದ್ದರು. ಇನ್ನು ಪರೀಕ್ಷೆ ಬರೆದು ಸಾಕಷ್ಟು ವಿದ್ಯಾರ್ಥಿಗಳು ಎರಡನೇ ಸುತ್ತಿನ ಪರೀಕ್ಷೆಗೆ ಅವಕಾಶ ನೀಡಿದ ಹಾಗೂ ಪರೀಕ್ಷಾ ವಂಚಿತ ವಿದ್ಯಾರ್ಥಿಗಳ ಪರ ಮರುಪರೀಕ್ಷೆಗೆ ಒತ್ತಾಯಿಸಿದ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ರಾಜ್ಯ ನಾಯಕರಿಗೆ ಧನ್ಯವಾದ ಹೇಳಿದರು.