ಅನರ್ಹಗೊಂಡಿರುವ ಶಾಸಕರ ಬಗ್ಗೆಯೂ ಬಿಜೆಪಿ ಗಮನಹರಿಸಲಿ
Team Udayavani, Aug 3, 2019, 3:03 AM IST
ಬಳ್ಳಾರಿ: “ಅನರ್ಹಗೊಂಡಿರುವ ಶಾಸಕರ ಬಗ್ಗೆಯೂ ಬಿಜೆಪಿ ಗಮನಹರಿಸಬೇಕಿದೆ’ ಎಂದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಶ್ರೀರಾಮುಲು, ಮೈತ್ರಿ ಸರಕಾರ ಪತನಗೊಳಿಸುವಲ್ಲಿ ಅನರ್ಹ ಶಾಸಕರು ಬಿಜೆಪಿಗೆ ಸಹಕಾರ ನೀಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಚಿವ ಸ್ಥಾನಕ್ಕಾಗಿ ನಾವೇ ಲಾಬಿ ನಡೆಸಿದರೆ ಹೇಗೆ? ನಮಗೆ ಸಹಾಯ ಮಾಡಿರುವ ಅನರ್ಹ ಶಾಸಕರ ಬಗ್ಗೆನೂ ಗಮನಹರಿಸಬೇಕಿದೆ.
ಮೈತ್ರಿ ಸರಕಾರದ ಆಡಳಿತದ ವಿರುದ್ಧ ಸಿಡಿದೆದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ನ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ನಮಗೆ ಸಹಾಯ ಮಾಡಿದ್ದಾರೆ. ಅವರಿಗೂ ಸಚಿವ ಸ್ಥಾನ ಕೊಡಬೇಕಾಗಲಿದೆ’ ಎಂದರು. ಶೀಘ್ರದಲ್ಲೇ 17 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.