
ಚುನಾವಣ ಆಯೋಗವೇ “ಸೂಪರ್ ಪವರ್’; ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ
ಆಡಳಿತ ಯಂತ್ರ ಆಯೋಗದ ಸುಪರ್ದಿಗೆ
Team Udayavani, Mar 30, 2023, 7:20 AM IST

ಬೆಂಗಳೂರು: ರಾಜ್ಯದ 16ನೇ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಮುಂದಿನ ಸುಮಾರು 45 ದಿನ ರಾಜ್ಯದಲ್ಲಿ ಚುನಾವಣ ಆಯೋಗವೇ “ಸೂಪರ್ ಪವರ್’ ಆಗಿರಲಿದೆ.
ನೀತಿ ಸಂಹಿತೆ ಜಾರಿಗೆ ಬಂದ ಕ್ಷಣದಿಂದಲೇ ಆಡಳಿತ ಯಂತ್ರ ತನ್ನ ಅಧಿಕಾರ ಕಳೆದುಕೊಳ್ಳಲಿದ್ದು, ಎಲ್ಲವೂ ಚುನಾವಣ ಆಯೋಗದ ಸುಪರ್ದಿಗೆ ಒಳಪಡಲಿದೆ. ಆಡಳಿತ ಯಂತ್ರ, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಚುನಾವಣ ಆಯೋಗದ ಅಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಮಾನ್ಯ ಜನರಿಗೂ ಇದು ಅನ್ವಯವಾಗುತ್ತದೆ.
ಆಯೋಗದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಾರ್ಯಾಚರಣೆ ಆರಂಭಿಸಿದೆ. ಹಣ ಬಲದ ಜತೆಗೆ ತೋಳ್ಬಲವನ್ನೂ ಮಟ್ಟ ಹಾಕಲು ಕಾರ್ಯತಂತ್ರ ಹೆಣೆಯಲಾಗಿದೆ. ಚುನಾವಣ ಅಕ್ರಮಗಳನ್ನು ಶೂನ್ಯ ಮಟ್ಟಕ್ಕೆ ತರಲು ಮಾದರಿ ನೀತಿ ಸಂಹಿತೆ ಜಾರಿ ತಂಡಗಳನ್ನು ಕಾರ್ಯರಂಗಕ್ಕಿಳಿಸಲಾಗಿದೆ.
ರಾಜ್ಯದಲ್ಲಿ ಈ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ರಾಜಕೀಯ ಪಕ್ಷಗಳು, ರಾಜಕಾರಣಿಗಳು, ಅಧಿಕಾರಿಗಳು ಸಹಿತ ಯಾರೂ ನೀತಿ ಸಂಹಿತೆಯನ್ನು ಉಲ್ಲಂ ಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿ ತಂಡಗಳು ಕಟ್ಟೆಚ್ಚರದಿಂದಿದ್ದು, ತಪಾಸಣೆ ಹಾಗೂ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿವೆ. ಅಕ್ರಮ ಮುಕ್ತ ಚುನಾವಣೆಗೆ ಸಹಕರಿಸಬೇಕು ಎಂದು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಿಗೆ ಆಯೋಗ ಸಲಹೆ ನೀಡಿದೆ. ಅಕ್ರಮ ತಡೆಗೆ ಸಾರ್ವಜನಿಕರೂ ಆಯೋಗದೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದೆ.
ಕೇಂದ್ರ ಸರಕಾರಕ್ಕೂ ಅನ್ವಯ
ಚುನಾವಣ ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ನೀತಿ ಸಂಹಿತೆ ನಿಬಂಧನೆಗಳು ಎಲ್ಲ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಅನ್ವಯವಾಗುತ್ತವೆ. ಮುಖ್ಯವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಘೋಷಣೆಗಳು ಮತ್ತು ನೀತಿ ನಿರ್ಧಾರಗಳು ಸಹಿತ ನೀತಿ ಸಂಹಿತೆ ಕೇಂದ್ರ ಸರಕಾರಕ್ಕೂ ಅನ್ವಯವಾಗುತ್ತದೆ. ಬರ, ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳಂತಹ ತುರ್ತು ಸಂದರ್ಭಗಳಲ್ಲಿ ಚುನಾವಣ ಆಯೋಗದ ಅನುಮತಿಯನ್ನು ಪಡೆದು ಸರಕಾರ ಮುಂದಡಿ ಇಡಬೇಕಾಗುತ್ತದೆ.
ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ವೆಚ್ಚವನ್ನು 40 ಲಕ್ಷ ರೂ.ಗೆ ನಿಗದಿಪಡಿಸಲಾಗಿದ್ದು, ಅದರ ಮೇಲೆ ಕಣ್ಣಿಡಲು “ಚುನಾವಣ ವೆಚ್ಚ ನಿರ್ವಹಣ ವ್ಯವಸ್ಥೆ'(ಇಇಎಂ)ಯನ್ನು ಜಾರಿಗೆ ತರಲಾಗಿದೆ. 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಇದಲ್ಲದೆ ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ಕಣ್ಗಾವಲು ತಂಡ, ವೀಡಿಯೋ ವೀಕ್ಷಣೆ ತಂಡ, ಖಾತೆ ತಂಡ, ಮಾಧ್ಯಮ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಕಮಿಟಿ, ಜಿಲ್ಲಾ ಖರ್ಚು ಮಾನಿಟರಿಂಗ್ ವ್ಯವಸ್ಥೆ, ರಾಜ್ಯ ಪೊಲೀಸ್, ಅಬಕಾರಿ, ಆದಾಯ ತೆರಿಗೆ ಇಲಾಖೆಯ ತನಿಖಾ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ, ಹಣಕಾಸು ಗುಪ್ತಚರ ಘಟಕ ಮತ್ತಿತರ ತಂಡಗಳ ಮೂಲಕ ಚುನಾವಣ ವೆಚ್ಚದ ಮೇಲೆ ನಿಗಾ ಇಡಲಾಗುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳ ಪ್ರಚಾರದ ವೆಚ್ಚಗಳನ್ನು ದೈನಂದಿನ ಆಧಾರದಲ್ಲಿ ನಿರ್ವಹಿಸಬೇಕು. ಚುನಾವಣೆ ಮುಗಿದ 75 ದಿನಗಳಲ್ಲಿ ಖರ್ಚು-ವೆಚ್ಚದ ವಿವರಗಳನ್ನು ತನಗೆ ಸಲ್ಲಿಸಬೇಕು ಎಂದು ಆಯೋಗ ಹೇಳಿದೆ.
ದೊಡ್ಡ ಮೊತ್ತದ ಪಾವತಿ ಮೇಲೆ ನಿಗಾ
ದೊಡ್ಡ ಮೊತ್ತದ ಬ್ಯಾಂಕ್ ವಹಿವಾಟುಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಗೂಗಲ್ ಪೇ, ಫೋನ್ ಪೇ ಮತ್ತಿತರ ಆನ್ಲೈನ್ ಪಾವತಿಗಳ ಬಗ್ಗೆ ಮಾಹಿತಿ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ಗೆ ಮನವಿ ಮಾಡಲಾಗಿದೆ. ಇದರ ಜತೆಗೆ ಒಂದೇ ಮೊತ್ತದ ಹೆಚ್ಚಿನ ಪಾವತಿಗಳು ಆಗಿದ್ದರೆ ಅಂದರೆ 2 ಸಾವಿರ ರೂ. ಹತ್ತು ಬಾರಿ ಪಾವತಿ ಆಗಿದ್ದರೆ ಅವುಗಳನ್ನು ಸಂಶಯಾಸ್ಪದ ಪಾವತಿಗಳೆಂದು ಪರಿಗಣಿಸಿ ಪರಿಶೀಲಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಇದೇ ವೇಳೆ ಮಾಹಿತಿ ನೀಡಿದರು.
ಪಕ್ಷಪಾತಿ ಅಧಿಕಾರಿಗಳ ವಿರುದ್ಧ ಕ್ರಮ
ಚುನಾವಣ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸರಕಾರಿ ನೌಕರರು ಯಾವುದೇ ಒಂದು ಪಕ್ಷದ ಪರ ಒಲವು ಹೊಂದಿರುವ ಬಗ್ಗೆ ದೂರು ಬಂದು ಮೇಲ್ನೋಟಕ್ಕೆ ಆರೋಪ ಸಾಬೀತಾದರೆ ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ತತ್ಕ್ಷಣ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿಯೇ ಅವರ ಕರ್ತವ್ಯ, ಇತಿಮಿತಿಗಳನ್ನು ವಿವರಿಸಲಾಗಿದೆ. ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಜಿಲ್ಲಾಧಿಕಾರಿಯೊಬ್ಬರ ವಿರುದ್ಧ ದೂರು ನೀಡಿದ್ದಾರೆ. ಅದರ ಪರಿಶೀಲನೆ ನಡೆಯುತ್ತಿದೆ ಎಂದು ಮನೋಜ್ ಕುಮಾರ್ ಮೀನಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ
ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಅವುಗಳನ್ನು ಚುನಾವಣೆ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಗೊತ್ತಾದರೆ ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿಗಳು ಭಾಗಿಯಾಗಬಹುದು. ಆದರೆ ಚುನಾವಣ ಆಮಿಷಗಳನ್ನು ನೀಡುವುದು ಅಥವಾ ಮತ ಯಾಚನೆ ಮಾಡಲು ಅವಕಾಶವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್, ಸೇನ್ ಕ್ವಾರ್ಟರ್ ಫೈನಲಿಗೆ