ಜನರಿಲ್ಲದೆ ಗಗನಚುಕ್ಕಿ ಜಲಪಾತೋತ್ಸವ ಖಾಲಿ
Team Udayavani, Jan 19, 2020, 3:04 AM IST
ಮಂಡ್ಯ/ಮಳವಳ್ಳಿ: ಜಲಪಾತೋತ್ಸವದಲ್ಲಿ ಖಾಲಿ ಬಂಡೆಗಳ ದರ್ಶನ. ಅಣೆಕಟ್ಟೆಯಿಂದ 30 ಸಾವಿರ ಕ್ಯೂಸೆಕ್ ನೀರು ಹರಿಸಿದರೂ ಕಾಣದ ಜಲವೈಭವ. ಮಜಾ ನೀಡದ ದೀಪಾಲಂಕಾರ. ಜನರಿಲ್ಲದೆ ಗಗನಚುಕ್ಕಿ ಖಾಲಿ, ಖಾಲಿ. ಜಲಪಾತೋತ್ಸವಕ್ಕೆ ಸ್ಥಳೀಯ ಜನರಿಂದಲೇ ನಿರಾಸಕ್ತಿ.
ಆಕರ್ಷಣೆ ಕಳೆದುಕೊಂಡ ಆಹಾರ ಮೇಳ. ಹೆಲಿಟೂರಿಸಂನತ್ತ ತಿರುಗಿಯೂ ನೋಡದ ಪ್ರವಾಸಿಗರು. ಕಾಟಾಚಾರಕ್ಕೆ ಆಯೋಜಿಸಿದಂತೆ ಕಂಡು ಬಂದ ಉತ್ಸವ… ಇದು ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವ ನಡೆಯುತ್ತಿರುವ ಸ್ಥಳದಲ್ಲಿ ಕಂಡು ಬಂದ ಪ್ರಮುಖ ದೃಶ್ಯಾವಳಿಗಳು.
ಗಗನಚುಕ್ಕಿ ಜಲಪಾತೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಎರಡು ದಿನಗಳ ಕಾಲ ಉತ್ಸವ ನಡೆಯಲಿದೆ. ಆದರೆ, ಹಿಂದೆ ನಡೆದ ಗಗನಚುಕ್ಕಿ ಜಲಪಾತೋತ್ಸವಗಳಿಗೆ ಹೋಲಿಸಿದರೆ ಈಗ ಆಯೋಜಿಸಿರುವ ಜಲಪಾತೋತ್ಸವ ಸಂಪೂರ್ಣವಾಗಿ ಕಳೆಗುಂದಿತ್ತು.
ಜನರ ಕೊರತೆ ಮರೆಮಾಚಲು ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿತ್ತು. ಸರ್ಕಾರಿ ಯೋಜನೆಗಳನ್ನು ಬಿಂಬಿಸುವ ಮಳಿಗೆಗಳ ಕಡೆ ಜನರು ತಿರುಗಿಯೂ ನೋಡುತ್ತಿರಲಿಲ್ಲ. ದೀಪಾಲಂಕಾರ ಮಜಾ ನೀಡದ ಕಾರಣ ಎಷ್ಟೋ ಮಂದಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನವೇ ಅಲ್ಲಿಂದ ನಿರ್ಗಮಿಸಿದರು.