ಶಾಲೆಗೆ ಬಂದ ಕಾಡಿನ ಮಕ್ಕಳು
Team Udayavani, Feb 5, 2020, 3:00 AM IST
ಶ್ರೀನಿವಾಸಪುರ: ಎರಡು ತಿಂಗಳಿಂದ ಶಿಕ್ಷಣದಿಂದ ವಂಚಿತರಾಗಿ ಆದಿವಾಸಿಗಳಂತೆ ಕಾಡಿನಲ್ಲಿ ಇದ್ದ ಮಕ್ಕಳು ಇದೀಗ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ನಿತ್ಯ 2 ಕಿ.ಮೀ.ನಡೆಯುವುದು ಈ ಸಣ್ಣ ಮಕ್ಕಳಿಗೆ ಪ್ರಯಾಸದ ಕೆಲಸವಾಗಿದೆ.
ತಾಲೂಕಿನ ಕೊಳ್ಳೂರು ಮತ್ತು ದೊಡಮಲದೊಡ್ಡಿ ಗ್ರಾಮಗಳಿಗೆ ಹೋಗುವ ರಸ್ತೆಯ ನಡುವಿನ ಕಾಡಿನಲ್ಲಿ ಕೂಲಿ ಮಾಡಿ ಕತ್ತಲೆಯ ಜೀವನ ನಡೆಸುತ್ತಿರುವ ಶಿವಮೊಗ್ಗ ಜಿಲ್ಲೆಯ ಈ ಕಾರ್ಮಿಕರ ಮಕ್ಕಳು, ಶಿಕ್ಷಣದಿಂದ ವಂಚಿತರಾಗಿರುವ ಬಗ್ಗೆ “ಉದಯವಾಣಿ’ ಜ.28ರಂದು ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಡಿನ ಸ್ಥಳಕ್ಕೆ ಹೋಗಿ, ಮಕ್ಕಳ ಪೋಷಕರಿಗೆ ತಿಳುವಳಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ 8, ಸೋಮವಾರ 18 ಮಕ್ಕಳು ಶಾಲೆಗೆ ಬಂದಿದ್ದರು.