“ಮಾಧ್ಯಮ ನಿರ್ಬಂಧ ತೆರವಿಗೆ ಪ್ರಯತ್ನಿಸುವೆ’
Team Udayavani, Oct 31, 2019, 3:00 AM IST
ಬೆಂಗಳೂರು: ಮುಂದಿನ ಅಧಿವೇಶನದಿಂದ ಹಿಂದಿದ್ದ ವ್ಯವಸ್ಥೆಯನ್ನೇ ಜಾರಿಗೆ ತರುವ ನಿಟ್ಟಿನಲ್ಲಿ ವಿಧಾನಸಭಾಧ್ಯಕ್ಷ ರಲ್ಲಿ ಮನವಿ ಮಾಡಿ ಕಾರ್ಯಗತವಾಗುವ ಭರವಸೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ವಿಧಾನಸಭೆ ಕಲಾಪ ಪ್ರಸಾರಕ್ಕೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮನ್ ಹಾಗೂ ಪತ್ರಿಕೆಗಳ ಛಾಯಾ ಗ್ರಹಕರಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ವಿಧಾನಸಭಾಧ್ಯಕ್ಷರ ತೀರ್ಮಾನವಾಗಿದ್ದು, ನಾನು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಮುಂದಿನ ಅಧಿವೇಶನದಿಂದ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೀರೋ, ಪರಿಹರಿಸುವ ಭರವಸೆ ನೀಡುತ್ತೀರೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಏನಾದರೂ ಹೇಳಿದರೆ ಅದು 100ಕ್ಕೆ 100ರಷ್ಟು ಆಗುತ್ತದೆ ಎಂಬ ಭಾವನೆಯಿಂದ ಹೇಳಿರುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಮುಂದಿನ ಅಧಿವೇಶನದಲ್ಲಿ ಹಿಂದೆ ಹೇಗಿತ್ತೋ ಅದೇ ವ್ಯವಸ್ಥೆ ತರುವ ನಿಟ್ಟಿನಲ್ಲಿ ಸಭಾಧ್ಯಕ್ಷರಲ್ಲಿ ಮನವಿ ಮಾಡಿ, ಕಾರ್ಯಗತಗೊಳಿಸುತ್ತೇನೆ ಎಂದು ಭರವಸೆ ನೀಡಿದರು.