ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ
Team Udayavani, Aug 18, 2022, 9:31 PM IST
ಸಕಲೇಶಪುರ: ಚಿಕ್ಕಮಗಳೂರಿನತ್ತ ಹೊರಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರನ್ಜು ಅಡ್ಡಗಟ್ಟಿ ಪ್ರತಿಭಟನೆಗೆ ಬಜರಂಗದಳ ಕಾರ್ಯಕರ್ತರು ಮುಂದಾದ ಘಟನೆ ತಾಲೂಕಿನ ಆನೆಮಹಲ್ ಸಮೀಪ ನಡೆಯಿತು.
ತಾಲೂಕಿನ ಆನೆಮಹಲ್ ಬಳಿ ಘಟನೆ ನಡೆದಿದ್ದು ಕೊಡಗು ಪ್ರವಾಸ ಮುಗಿಸಿ ಸಕಲೇಶಪುರ ತಾಲೂಕಿನ ಹಾನಬಾಳ್ ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಗೆ ಮಾಜಿ ಸಿಎಂ ಹೊರಟಿದ್ದರು.ಈ ವೇಳೆ ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ನೇತೃತ್ವದಲ್ಲಿ ಸಾವರ್ಕರ್ ಫೋಟೋ ಹಿಡಿದು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು.
ದಿಢೀರ್ ಪ್ರತಿಭಟನೆಯಿಂದ ಕೆಲ ಸಮಯ ಮಾಜಿ ಸಿಎಂ ಕಾರು ಸ್ಥಳದಲ್ಲೆ ನಿಂತಿದ್ದು ,ಕೂಡಲೆ ಪ್ರತಿಭಟನಾಕಾರರನ್ನು ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯ ಮುಂದೆ ತೆರಳಲು ಪೊಲೀಸರು ನೆರವಾದರು. ಖುದ್ದು ಸ್ಥಳದಲ್ಲಿದ್ದ ಎಸ್ಪಿ ಹರಿರಾಮ್ ಶಂಕರ್ ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ನಿಭಾಯಿಸಿದರು.
ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಇಂದು ಬೆಳಗ್ಗೆಯಿಂದ ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆದಿದ್ದು ಸಂಜೆ ವೇಳೆಗೆ ಹಾಸನ ಜಿಲ್ಲೆ ಮೂಲಕ ತೆರಳುವ ವೇಳೆ ಇಲ್ಲಿಯೂ ಪ್ರತಿಭಟನೆ ಎದುರಿಸಿದ ಸಿದ್ದರಾಮಯ್ಯ ನಂತರ ಚಿಕ್ಕಮಗಳೂರು ಕಡೆ ತೆರಳಿದರು.