ರೈಲು ಮಾರ್ಗ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ
Team Udayavani, Oct 30, 2017, 10:55 AM IST
ಬೀದರ: “ಹೈದ್ರಾಬಾದ್ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆ ಬೀದರ-ಕಲಬುರಗಿ ರೈಲು ಮಾರ್ಗ ವಿಳಂಬಕ್ಕೆ ಮತ್ತು ಯೋಜನಾ ವೆಚ್ಚ ಹೆಚ್ಚಳವಾಗಲು ರಾಜ್ಯ ಸರ್ಕಾರವೇ ಮುಖ್ಯ ಕಾರಣ. ಯೋಜನೆ ಪೂರ್ಣಗೊಳ್ಳುವಲ್ಲಿ ಆದ ವಿಳಂಬದ ಶ್ರೇಯಸ್ಸನ್ನು ಬೇಕಾದರೆ ಕಾಂಗ್ರೆಸ್ ಪಡೆಯಲಿ’ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ವ್ಯಂಗ್ಯವಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸರಿಯಾಗಿ ಫೋಕಸ್ ಮಾಡಲಿಲ್ಲ. ಅವರ ಅವಧಿಯಲ್ಲಿ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿದ್ದರೆ ಕೆಲಸ ಪೂರ್ಣಗೊಳಿಸಬಹುದಿತ್ತು. ವಿಭಾಗೀಯ ಕಚೇರಿ ಸ್ಥಾಪನೆಗೆ ನೀಡಿದ್ದ ಒತ್ತನ್ನು ಬೀದರ- ಕಲಬುರಗಿ ರೈಲು ಮಾರ್ಗ ಪೂರ್ಣಗೊಳಿಸಲು ನೀಡದಿರುವುದು ದುರದೃಷ್ಟಕರ.ಖರ್ಗೆ ಅವರಿಗೆ ಈ ಭಾಗದ ಅಭಿವೃದ್ಧಿ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ವಿಳಂಬ ಆಗುತ್ತಿರಲಿಲ್ಲ ಎಂದರು.
ರೈಲು ಮಾರ್ಗಕ್ಕೆ ಅಗತ್ಯ ಜಮೀನು ಒದಗಿಸಿಕೊಡದಿರುವುದು ಸೇರಿದಂತೆ ಅಗತ್ಯ ಸಹಕಾರ ಸಿಗದಿರುವುದು ಯೋಜನೆ ವಿಳಂಬಗೊಳ್ಳಲು ಕಾರಣವಾಯಿತು ಎಂದರು.
ಬೀದರ-ಕಲಬುರಗಿ ರೈಲು ಮಾರ್ಗ ಲೋಕಾರ್ಪಣೆ ಕಾರ್ಯಕ್ರಮ ಈ ಹಿಂದೆಯೇ ನಿಗದಿಯಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪ್ರಧಾನಿಗಳ ಕಾರ್ಯಕ್ರಮ ಇರುವುದರಿಂದ ಮುಖ್ಯಮಂತ್ರಿ ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.
●ಪಿಯೂಷ್ ಗೋಯಲ್ , ರೈಲ್ವೆ ಸಚಿವ.
ಬೀದರ್ ಕಾರ್ಯ ಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ. ಧರ್ಮಸ್ಥಳದ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಲ್ಲ. ಕರೆಯದೇ ಇರುವ ಕಡೆ
ನಾನು ಹೋಗಲು ಸಿದ್ಧನಿಲ್ಲ. ಪ್ರಧಾನಮಂತ್ರಿ ಜೊತೆಯಲ್ಲಿ ಸಚಿವ ರಮಾನಾಥ ರೈ ಇದ್ದಾರೆ. ರಾಜ್ಯದ ಸಮಸ್ಯೆಗಳನ್ನು ಅವರು
ವಿವರಿಸಲಿದ್ದಾರೆ.
●ಸಿದ್ದರಾಮಯ್ಯ, ಮುಖ್ಯಮಂತ್ರಿ