ತಿರುಮಕೂಡಲು ಕುಂಭಮೇಳಕ್ಕೆ 4 ದಿನ ಬಾಕಿ, ಭರದ ಸಿದ್ಧತೆ
Team Udayavani, Feb 13, 2019, 1:09 AM IST
ತಿ.ನರಸೀಪುರ: ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾದ ತಾಲೂಕಿನ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಫೆ.17ರಿಂದ 3 ದಿನ ನಡೆಯುವ 11ನೇ ಮಹಾ ಕುಂಭಮೇಳಕ್ಕೆ ಭರದ ಸಿದಟಛಿತೆ ನಡೆಯುತ್ತಿದೆ. ಉತ್ಸವದ ಅಂಗವಾಗಿ ನಡೆಯಲಿರುವ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಿಗದಿತ ಸ್ಥಳದಲ್ಲಿ ಶಾಮಿಯಾನ ಅಳವಡಿಸಲು ಕಾಮಗಾರಿ ನಡೆಯುತ್ತಿದೆ. ಪುಣ್ಯ ಸ್ನಾನದ ನಂತರ ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿ ನಿರ್ಮಾಣ, ಮಠಾಧೀಶರು ಹಾಗೂ ಯತಿ ವರ್ಯರು ಸ್ನಾನ ಮಾಡುವ ನಿಗದಿತ ಸ್ಥಳದ ಸುತ್ತ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ.
ಸಂಗಮದ ಮಧ್ಯಭಾಗದಲ್ಲಿರುವ ನಡುಹೊಳೆ ಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಭಕ್ತರು ಆಗಮಿಸುವ ಹಿನ್ನೆಲೆ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ನದಿಯ ಮೂಲಕ ಹಾದು ಹೋಗಲು ಮರಳಿನ ಮೂಟೆ ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅಗತ್ಯವಿರುವ ಪೊಲೀಸರಿಗೆ ವಸತಿ ಸೌಲಭ್ಯ, ಅಳವಡಿಸಬೇಕಾದ ಶಾಮಿಯಾನದ ಬಗ್ಗೆ ಸಂಬಂಧಿಸಿದವರ ಜತೆ ಚರ್ಚಿಸಿದರು.