ಅಗ್ರಿ ಟೂರಿಸಂಗೆ ಮುಂದಾದ ಪ್ರವಾಸೋದ್ಯಮ ಇಲಾಖೆ
Team Udayavani, May 30, 2020, 7:28 AM IST
ಬೆಂಗಳೂರು: ಕೃಷಿ ಹಾಗೂ ಗ್ರಾಮೀಣ ಸಂಸ್ಕೃತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಇಲಾಖೆ ಸಮನ್ವ ಯದಲ್ಲಿ ಯೋಜನೆ ರೂಪಿಸಲಾಗಿದ್ದು ಕೃಷಿಯ ಕುರಿತು ಜನರಲ್ಲಿ ಅರಿವು ಮತ್ತು ಹೆಮ್ಮೆ ಮೂಡಿಸುವುದು ಮತ್ತು ಕೃಷಿ ಪ್ರವಾಸಗಳ ಮೂಲಕ ರೈತರು ಮತ್ತು ಗ್ರಾಮೀಣ ಸಮುದಾಯಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಟ್ಟು ರೈತರ ಆದಾಯ ಸಹ ದ್ವಿಗುಣಗೊಳಿಸುವುದು ಯೋಜನೆಯ ಉದ್ದೇಶ. ಶುಕ್ರವಾರ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ., ಕರ್ನಾಟಕದಲ್ಲಿ ಅಗ್ರಿ ಟೂರಿಸಂ ಅಥವಾ ಕೃಷಿ ಪ್ರಧಾನ ಹೊಸ ಪರಿಕಲ್ಪನೆಯಾಗಿದ್ದು ಇದು ಕೃಷಿ,ತೋಟಗಾರಿಕೆ, ಸಂಸ್ಕೃತಿ, ಪ್ರವಾಸೋದ್ಯಮದ ಸಮ್ಮಿಲನವಾಗಿದೆ ಎಂದು ಹೇಳಿದರು. ನಗರ ವಾಸಿಗಳಿಗೆ ಕೃಷಿಯ ಬಗ್ಗೆ ತಿಳಿಸಲು ಮತ್ತು ರೈತರಿಗೆ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯ ಜತೆಗೆ ಗ್ರಾಮೀಣಾಭಿವೃದ್ಧಿಗೂ ಒತ್ತು ನೀಡಿದಂತಾಗುತ್ತದೆ ಎಂದು ತಿಳಿಸಿದರು. ಅಗ್ರಿ ಟೂರಿಸಂನಲ್ಲಿ ಪ್ರವಾಸಿಗರು ಸ್ವತಃ ನಾಟಿ ಮಾಡುವುದು,
ಬೀಜಗಳ ಬಿತ್ತನೆ, ಕಟಾವು ಸೇರಿದಂತೆ ಅನುಭವ ಪಡೆಯಬಹುದು. ಗ್ರಾಮೀಣ ಕರಕುಶಲ ವಸ್ತುಗಳು, ಉಡುಗೆಗಳು, ತಾಜಾ ಕೃಷಿ ಉತ್ಪನ್ನಗಳು, ಆಹಾರ ಪದಾಥಗಳನ್ನು ಕಡಿಮೆ ದರದಲ್ಲಿ ರೈತರ ತೋಟದಲ್ಲಿಯೇ ಪ್ರವಾಸಿಗರು ಖರೀದಿಸಬಹುದು ಎಂದು ಹೇಳಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಅಗ್ರಿಟೂರಿಸಂ ನಮ್ಮ ಶಕ್ತಿಯಾಗಿದೆ ಎಂದರು. ತೋಟಗಾರಿಕೆ ಸಚಿವ ನಾರಾಯಣಗೌಡ ಮಾತನಾಡಿ, ಈ ಯೋಜನೆ ಮೂಲಕ ರೈತರಿಗೆ ಶಕ್ತಿ ತುಂಬುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.