ಪ್ರವಾಸೋದ್ಯಮ, ವಾರ್ತಾ, ಕನ್ನಡ ಮತ್ತು ಸಂಸ್ಕೃತಿ, ಕ್ರೀಡಾ ಇಲಾಖೆ ವಿಲೀನಕ್ಕೆ ಚಿಂತನೆ
Team Udayavani, Jun 7, 2020, 7:22 AM IST
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಯುವಜನ ಸೇವೆ ಇಲಾಖೆಗಳನ್ನು ವಿಲೀನಗೊ ಳಿಸಿ ಒಂದೇ ಸಚಿವಾಲಯದಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಮಾತ ನಾಡಿದ ಅವರು, ವೆಚ್ಚ ಕಡಿಮೆ ಮಾಡುವ ಉದ್ದೇಶ ಹಾಗೂ ಹುದ್ದೆಗಳ ಕಡಿತ ಹಿನ್ನೆಲೆಯಲ್ಲಿ ಇಲಾಖೆಗಳ ವಿಲೀನಕ್ಕೆ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ರೀತಿ ಇತರೆ ಇಲಾಖೆಗಳ ವಿಲೀನಗೊಳಿಸುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಮುಖ್ಯ ಮಂತ್ರಿಯವರ ಜತೆ ಚರ್ಚಿಸಿ ನಾಲ್ಕು ಇಲಾಖೆಗಳ ವಿಲೀನ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಜುಲೈ ಎರಡನೇ ವಾರದಲ್ಲಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೊಳಿಸಲಾಗುವುದು. ಅಗತ್ಯವಿರುವ ಪ್ರವಾಸೋದ್ಯಮ ತಾಣಗಳಲ್ಲಿ ಹೋಟೆಲ್ ನಿರ್ಮಿಸಿದರೆ ಸಬ್ಸಿಡಿ ನೀಡುವುದು ಇದರಲ್ಲಿ ಸೇರಿದೆ ಎಂದು ಹೇಳಿದರು. ಇತರೆ ಭಾಷೆಗಳ ಚಿತ್ರಗಳ ಚಿತ್ರೀಕರಣಕ್ಕೆ ರಾಜ್ಯದಲ್ಲಿ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಇದರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು. ಕೊಪ್ಪಳ ಸಮೀಪದ ಬಹದ್ದೂರ ಬಾಂಡ ಗ್ರಾಮದಲ್ಲಿ ಬಂಜಾರ ಹೆರಿಟೇಜ್ ವಿಲೇಜ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಬಂಜಾರ ಅಭಿವೃದಿ ನಿಗಮ ಮತ್ತು ಕೆಎಸ್ಟಿಡಿಸಿ ಸಹಯೋಗದಲ್ಲಿ ಯೋಜನೆ ಸಾಕಾರವಾಗಲಿದೆ. ಜತೆಗೆ ಆದಿವಾಸಿ ಕಲ್ಚರಲ್ ಹೆರಿಟೇಜ್ ಸಹ ರಾಮನಗರದ ಜಾನಪದ ಲೋಕದಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.