
ಅಭಿವೃದ್ಧಿ ಕಾರ್ಯಕ್ಕೆ ರಕ್ಷಣಾ ಇಲಾಖೆಯ ಭೂಮಿ:ಸಚಿವೆ ನಿರ್ಮಲಾ ಅನುಮತಿ
Team Udayavani, Aug 4, 2018, 3:40 PM IST

ಬೆಂಗಳೂರು: ನಗರದಲ್ಲಿ ಅಭಿವೃದ್ದಿ ಕಾರ್ಯಕ್ಕೆ ರಕ್ಷಣಾ ಇಲಾಖೆಯ ಭೂಮಿ ಬಿಟ್ಟು ಕೊಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುಮತಿ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಿರ್ಮಲಾ ಸೀತಾರಾಮನ್ ಅವರೊಂದಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಸಚಿವೆ ನಿರ್ಮಲಾ ಅವರು 10 ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡಲು ಅನುಮತಿ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಮೆಟ್ರೋ ನಿಲ್ದಾಣಗಳ ಅಭಿವೃದ್ಧಿಗೆ, ಮೆಟ್ರೋ ಜಾಲ ವಿಸ್ತಿರಿಸಲು ರಕ್ಷಣಾ ಇಲಾಖೆಯ ಅಗತ್ಯವಿದ್ದಷ್ಟು ಭೂಮಿ ಬಿಟ್ಟು ಕೊಡುವಂತೆ ಮನವಿ ಮಾಡಿದ್ದರು.
ರೈಲ್ವೆ ಮೇಲ್ಸೇತುವೆ (ಆರ್ಒಬಿ), ಸರ್ವಿಸ್ ರಸ್ತೆ, ಪಾದಚಾರಿ ಮಾರ್ಗ, ಮೆಟ್ರೋ ಎರಡನೇ ಹಂತದ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ನಗರದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 16 ಎಕರೆ ಭೂಮಿಯ ಅವಶ್ಯಕತೆ ಇತ್ತು. ಆ ಭೂಮಿಯನ್ನು ಹಸ್ತಾಂತರಿಸಿ, ಬದಲಿ ಭೂಮಿಯನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರವು ಸಚಿವರಿಗೆ ಮನವಿ ಸಲ್ಲಿಸಿದೆ.
ಬಿಬಿಎಂಪಿಗೆ ಸಂಬಂಧಿಸಿದ ಒಟ್ಟಾರೆ 11 ಕಾಮಗಾರಿಗಳು ರಕ್ಷಣಾ ಇಲಾಖೆಗೆ ಸೇರಿದ ಭೂಮಿಯಲ್ಲಿ ಬರುತ್ತಿದ್ದು, ಈ ಪೈಕಿ 9 ಯೋಜನೆಗಳಿಗೆ 16 ಎಕರೆ ಭೂಮಿಯ ಅಗತ್ಯವಿತ್ತು. ಭೂಮಿಯ ಮೌಲ್ಯ ಸರಿಸುಮಾರು 328 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆ ಭೂಮಿ ಹಸ್ತಾಂತರಿಸಿದರೆ, ಪ್ರತಿಯಾಗಿ ಆನೇಕಲ್ ತಾಲ್ಲೂಕಿನ ಕಮ್ಮನಾಯಕನಹಳ್ಳಿ ಬಳಿ 207.6 ಎಕರೆ ಹಾಗೂ ಹಲಸೂರು ಕೆರೆ ಪಕ್ಕದಲ್ಲಿ 488 ಕೋಟಿ ರೂ. ಮೌಲ್ಯದ 2.2 ಎಕರೆ ಭೂಮಿಯನ್ನು ರಕ್ಷಣಾ ಇಲಾಖೆಗೆ ನೀಡಬಹುದು ಎಂದು ಅಧಿಕಾರಿಗಳು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.
ಬೆಂಗಳರೂರಿನಿಂದ ಏರ್ ಶೋ ಸ್ಥಳಾಂತರಿಸಲು ರಕ್ಷಣಾ ಇಲಾಖೆಯಿಂದ ಇದುವರೆಗೆ ಯಾವುದೇ ಪ್ರಕಟಣೆ ನೀಡಿಲ್ಲ.
ಟಾಪ್ ನ್ಯೂಸ್
