ಮುಂದಿನ ತಿಂಗಳು ಶಿಕ್ಷಕರ ವರ್ಗಾವಣೆ
Team Udayavani, Aug 26, 2022, 6:39 AM IST
ಬೆಂಗಳೂರು: ಕಳೆದ ವರ್ಷ ಅವಕಾಶ ಸಿಗದೆ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ.
ಮುಂದಿನ ತಿಂಗಳು 2022-23ನೇ ಸಾಲಿನ ಸಾಮಾನ್ಯ ವರ್ಗಾವಣೆ ನಡೆಸಲು ಸರಕಾರ ಸಮ್ಮತಿಸಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮ-2020) ಅನ್ವಯ ವರ್ಗಾವಣೆ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಸೆಪ್ಟಂಬರ್ನಲ್ಲಿ ಪ್ರಾರಂಭಿಸಲು ಚಿಂತಿಸಲಾಗಿದೆ. ಈ ಸಂಬಂಧ ಪೂರ್ವಭಾವಿಯಾಗಿ ಶಿಕ್ಷಕ ಮಿತ್ರ (ಇಇಡಿಎಸ್) ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಪರಿಶೀಲಿಸಿ ನಿಖರ ಮಾಹಿತಿ ಯನ್ನು ಸೆ. 2ರೊಳಗೆ ಸೇರಿಸಲು ಸೂಚಿಸಲಾಗಿದೆ.
ಈ ಕುರಿತು ಅಧಿಕಾರಿಗಳಿಗೆ ಜಿಲ್ಲಾ ವಾರು ವರ್ಚುವಲ್ ವೇದಿಕೆಯಲ್ಲಿ ಸಭೆಗಳಲ್ಲಿ ತಿಳಿಸಲಾಗಿದೆ. ಎಲ್ಲ ಬಟವಾಡೆ ಅಧಿಕಾರಿಗಳು ಈ ಬಗ್ಗೆ ಪ್ರಥಮ ಆದ್ಯತೆ ನೀಡಿ ತಮ್ಮ ಅಧೀನ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ತಂತ್ರಾಂಶದಲ್ಲಿ ಲಭ್ಯವಾಗಿಸಬೇಕು ಎಂದು ಸೂಚಿಸಿದೆ.
ಯಾವ್ಯಾವ ವಿವರಗಳು?:
ನಿವೃತ್ತಿ ಹೊಂದಿರುವವರು, ಸ್ವಯಂ ನಿವೃತ್ತಿ, ಅಕಾಲಿಕ ಮರಣ ಹೊಂದಿರುವ ಶಿಕ್ಷಕರ ವಿವರ, ಅನುದಾನಿತ ಸಂಸ್ಥೆಯ ಶಿಕ್ಷಕರನ್ನು ಸರಕಾರಿ ಶಿಕ್ಷಕರೆಂದು ನಮೂದಿಸಿರುವ ಪ್ರಕರಣಗಳು, ಪ್ರಾಥಮಿಕ ಶಿಕ್ಷಕರನ್ನು ಪ್ರೌಢಶಾಲಾ ಶಿಕ್ಷಕರಾಗಿ ಭಡ್ತಿ ಹೊಂದಿರುವ ಪ್ರಕರಣಗಳು, ಅಮಾನತು ಆಗಿರುವ ಶಿಕ್ಷಕರ ವಿವರಗಳನ್ನು ಒದಗಿಸಬೇಕಿದೆ.
ಶಿಕ್ಷಕ ಮಿತ್ರದಲ್ಲಿ ಒದಗಿಸಲಾಗುವ ವಿವರಗಳನ್ನು ಮಾತ್ರ ವರ್ಗಾವಣೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಆದ್ದರಿಂದ ಬಟವಾಡೆ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿ ವರ್ಗದವರ ಪೂರ್ಣ ಪ್ರಮಾಣದ ಸೇವಾ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಬೇಕು. ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ಗೊಂದಲಗಳಿದ್ದಲ್ಲಿ ವಿವರಗಳನ್ನು [email protected] ಗೆ ಸಲ್ಲಿಸಬಹುದಾಗಿದೆ.