ಕಥಾ ಸಾಹಿತ್ಯ ಭಾರತೀಯರ ಆತ್ಮದಲ್ಲಿದೆ: ಕಂಬಾರ
Team Udayavani, Sep 23, 2018, 9:50 AM IST
ಬೆಂಗಳೂರು: ಕಥನದಲ್ಲಿ ಭಾರತೀಯರಿಂದ ಮಾತ್ರ ಹೊಸತನ ನಿರೀಕ್ಷಿಸಲು ಸಾಧ್ಯ. ಸಾವಿರಾರು ವರ್ಷಗಳ ಹಿಂದೆ ರಚನೆಯಾದ ಮಹಾಭಾರತ ಈಗಲೂ ನಾನಾ ರೂಪದಲ್ಲಿ ಮೂಡಿ ಬರುತ್ತಿದೆ. ಈ ಮೂಲಕ ಇಡೀ ದೇಶವೇ ಮಹಾಕಾವ್ಯ ಬರೆಯುತ್ತದೆ. ಇದಕ್ಕಿಂತ ದೊಡ್ಡ ಪವಾಡ ಮತ್ತೂಂದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ನಗರದ ಅಜಂತಾ ಹೋಟೆಲ್ನಲ್ಲಿ ಶನಿವಾರ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ “ತುಷಾರ’ ಮಾಸಪತ್ರಿಕೆ ಹಾಗೂ ಕ್ಯಾಲಿಫೋರ್ನಿಯಾದ ಸಾಹಿ ತ್ಯಾಂಜಲಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ 2018ನೇ ಸಾಲಿನ “ಕಥಾ ಸ್ಪರ್ಧೆ’ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
ನಮ್ಮ ದೇಶದ ಸಾಹಿತ್ಯ ಪ್ರಕಾರವೇ ಕಥೆ. ಈ ಕಲೆ ನಮ್ಮ ರಕ್ತದಲ್ಲಿ ಮತ್ತು ಆತ್ಮದಲ್ಲೇ ಇದೆ. ಇತ್ತೀಚೆಗೆ ಪಶ್ಚಿಮದ ಪ್ರಭಾವದಿಂದ ಕಥನದ ರೀತಿಯಲ್ಲಿ ಲಘುತ್ವ ಕಂಡು ಬರುತ್ತಿದೆ. ಜೀವನವನ್ನು ಆಳವಾದ ದೃಷ್ಟಿಕೋನದಿಂದ ನೋಡಲು ಹೆದರುತ್ತಿದ್ದೇವೆ ಎಂದು ಅನಿಸುತ್ತದೆ. ಈ ಸಂದರ್ಭ ಕಥಾ ಸಾಹಿತ್ಯ ಪ್ರೋತ್ಸಾಹಿಸುವ “ತುಷಾರ’ದ ಕೆಲಸ ಅನುಕರಣೀಯ ಎಂದರು.
ಹೊಸ ಭರವಸೆ ಮೂಡಿದೆ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಮೇಲ್ನೋಟಕ್ಕೆ ಕಥೆಗಳನ್ನು ಬರೆಯುವ ಮತ್ತು ಓದುಗರ ಸಂಖ್ಯೆ ಕಡಿಮೆಯಾದಂತೆ ಅನಿ ಸುತ್ತದೆ. ಆದರೆ, ವಾಸ್ತವವಾಗಿ ಕಥೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ “ತುಷಾರ’ ಕಥಾಸ್ಪರ್ಧೆಗಳೇ ಸಾಕ್ಷಿ ಎಂದು ಹೇಳಿದರು. ಪುಸ್ತಕ ಪ್ರಕಟನೆಗಾಗಿ ಈಚೆಗೆ ಪುಸ್ತಕ ಪ್ರಾಧಿಕಾರಕ್ಕೂ ನಿರೀಕ್ಷೆ ಮೀರಿ ಕಥೆಗಳು ಬಂದಿದ್ದವು. ಅದರಲ್ಲೂ ಮಹಿಳೆಯರಿಂದ ಹೆಚ್ಚು, ಕಥೆಗಳು ರಚನೆ ಆಗುತ್ತಿವೆ. ಅದೇ ರೀತಿ, ಆನ್ಲೈನ್ನಲ್ಲಿ ಇ-ಬುಕ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪುಸ್ತಕಗಳ ಮಾರಾಟ ಆಗುತ್ತಿದೆ. ಈ ಬೆಳವಣಿಗೆಗಳು ಹೊಸ ಭರವಸೆ ಮೂಡಿಸಿವೆ. ಆದರೆ, ಈ ಇಂಟರ್ನೆಟ್ ಹಾವಳಿಯಿಂದ ಕಥೆಗಳು ಸ್ವಲ್ಪ ನೇಪಥ್ಯಕ್ಕೆ ಸರಿದಂತೆ ಕಾಣಬಹುದು. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕಥೆಗಾಗಿಯೇ ಅವಧಿ ಮೀಸಲಿಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಿರಂತರವಾಗಿ ಬರೆಯಿರಿ; ಕಿವಿಮಾತು
“ತುಷಾರ’ ಮಾಸಪತ್ರಿಕೆ ಮತ್ತು “ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಮಾತನಾಡಿ, ಪ್ರತಿಯೊಬ್ಬ ಲೇಖಕನಲ್ಲೂ ಅನೇಕ ಕಥೆಗಳಿರುತ್ತವೆ. ಆದರೆ ಅದರ ನಿರೂಪಣೆಯೇ ಸವಾಲಿನ ಕೆಲಸ. ಹಾಗಾಗಿ, ಅದೊಂದು ವಿಶೇಷ ಪ್ರತಿಭೆ. ಆದ್ದರಿಂದ ಕೇವಲ ಸ್ಪರ್ಧೆಗಾಗಿ ಕಥೆಗಳನ್ನು ರಚಿಸದೆ, ನಿರಂತರವಾಗಿ ಬರೆಯಬೇಕು ಎಂದು ಕಥಾ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಧೆಯಲ್ಲಿ ಸುಮಾರು 500ಕ್ಕೂ ಅಧಿಕ ಕಥೆಗಳು ಬಂದಿದ್ದವು. ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಆದರೆ, ನಮ್ಮ ಮಿತಿಯಲ್ಲಿ ಕೆಲವನ್ನು ಮಾತ್ರ ಆಯ್ಕೆ ಮಾಡಬೇಕಾಯಿತು ಎಂದರು.
ಅಭಿನವ ಪ್ರಕಾಶನದ ರವಿಕುಮಾರ್ ಮಾತನಾಡಿ, ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಥಾ ಸ್ಪರ್ಧೆ ನಿರಂತರವಾಗಿ ಇರಲಿದೆ. ಪ್ರಶಸ್ತಿ ವಿಜೇತರ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಿಕ್ಕೂ ಸಾಹಿತ್ಯಾಂಜಲಿ ಸಿದ್ಧವಿದೆ. ಅಷ್ಟೇ ಅಲ್ಲ, ಡಾ|ಸಂಧ್ಯಾ ಪೈ ಅವರ ಅಂಕಣ “ಸ್ಮತಿ ಗಂಧವತಿ’ಯಲ್ಲಿನ ಲೇಖನಗಳನ್ನು ಪುಸ್ತಕ ರೂಪದಲ್ಲೂ ತರಲು ಸಿದ್ಧ ಎಂದರು. ಮಣಿಪಾಲ ಮೀಡಿಯ ನೆಟ್ವರ್ಕ್ ಲಿ.ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಕುಮಾರ್ ಸ್ವಾಗತಿಸಿದರು. ಉದಯವಾಣಿ ಸಾಪ್ತಾಹಿಕ ಸಂಪಾದಕ ಪೃಥ್ವೀರಾಜ ಕವತ್ತಾರು ನಿರೂಪಿಸಿದರು.
ಪುರಸ್ಕೃತ ಕತೆಗಾರರು
ದೀಪ್ತಿ ಭದ್ರಾವತಿ (ಪ್ರಥಮ), ಕೆ. ಷರೀಫಾ (ದ್ವಿತೀಯ), ನಾಗರೇಖಾ ಗಾಂವಕರ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು. ಅದೇ ರೀತಿ, ಮೆಚ್ಚುಗೆ ಪಡೆದ ಕತೆಗಳ ವಿಭಾಗದಲ್ಲಿ ವಸುಮತಿ ಉಡುಪ, ಸುರೇಶ್ ಹೆಗಡೆ, ರೇಷ್ಮಾ ಭಟ್, ವಾಸುದೇವ ನಾಡಿಗ್ ಅವರನ್ನು ಪುರಸ್ಕರಿಸಲಾಯಿತು.
ವಿಜೇತರ ಅನಿಸಿಕೆ
ನನ್ನಂತಹ ಅನೇಕ ಉದಯೋನ್ಮುಖ ಪ್ರತಿಭೆಗಳನ್ನು ಈ ತುಷಾರ ಕಥಾ ಸ್ಪರ್ಧೆ ಬೆಳೆಸುತ್ತಿದೆ. ಹೆಮ್ಮೆಗಿಂತ ಆತ್ಮವಿಶ್ವಾಸ ಹೆಚ್ಚಿಸಿದೆ. ನಾವು ಹೋಗುತ್ತಿರುವ ದಾರಿ ಸರಿಯಾಗಿದೆಯೇ ಎಂಬುದನ್ನು ತಿಳಿಯಲು ಈ ಸ್ಪರ್ಧೆ ಅನುಕೂಲ ಆಗಿದೆ. 2015ರಲ್ಲಿ ಇದೇ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೆ. ಈಗ ಆ ಖುಷಿಗೆ ಮತ್ತೂಂದು ಬೋನಸ್ ಸಿಕ್ಕಿದೆ.
ದೀಪ್ತಿ ಭದ್ರಾವತಿ, ಪ್ರಥಮ ಬಹುಮಾನ ವಿಜೇತರು
ಇದೊಂದು ಕನಸು ಅನಿಸುತ್ತಿದೆ. ತುಷಾರಕ್ಕೆ ಋಣಿಯಾಗಿದ್ದೇನೆ. ಬಹುಮಾನ ಗಿಟ್ಟಿàತು ಎಂಬ ಭರವಸೆ ಇತ್ತು. ನನ್ನ ಚೊಚ್ಚಲ ಕತೆ “ಸ್ಟ್ರಾಬೆರಿ’ಗೆ ಮೆಚ್ಚುಗೆ ಸಿಕ್ಕಿದ್ದು ಖುಷಿ ತಂದಿದೆ.
ಸುರೇಶ್ ಹೆಗಡೆ, ಮೆಚ್ಚುಗೆ ಪಡೆದ ಕತೆಯ ವಿಜೇತರು
ಸ್ಪರ್ಧೆಗಾಗಿ ಕತೆ ಬರೆದಿರಲಿಲ್ಲ. ಮನೋ ಡೈರಿಯಲ್ಲಿದ್ದ ನೆನಪುಗಳನ್ನು ಆಧರಿಸಿ ಕಥೆ ಬರೆದಿದ್ದೆ. ಆ ಮನೋಡೈರಿಗೆ ಮತ್ತೂಂದು ನೆನಪು ಈಗ ಸೇರ್ಪಡೆ ಗೊಂಡಿದೆ. ಅದು ಈ ಪುರಸ್ಕಾರ.
ರೇಷ್ಮಾ ಭಟ್, ಮೆಚ್ಚುಗೆ ಪಡೆದ ಕತೆಯ ವಿಜೇತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ