ಸೋಂಕಿತರ ಚಿಕಿತ್ಸೆಗಾಗಿ ಅರ್ಧದಷ್ಟು ಹಾಸಿಗೆ ನೀಡಲು ಒಪ್ಪಿದ ನಗರದ 2 ಖಾಸಗಿ ಆಸ್ಪತ್ರೆಗಳು
ಅರ್ಧದಷ್ಟು ಹಾಸಿಗೆ ನೀಡುವಂತೆ 2 ಕ್ಷೇತ್ರಗಳ ಖಾಸಗಿ ಆಸ್ಪತ್ರೆಗಳ ಮನವೊಲಿಸಿದ ಡಿಸಿಎಂ
Team Udayavani, Jul 20, 2020, 10:24 PM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ರೋಗಿಗಳಿಗೆ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆಯಾಗದಂತೆ ರಾಜ್ಯ ಸರಕಾರ ಸಾಕಷ್ಟು ಎಚ್ಚರಿಕೆ ವಹಿಸುತ್ತಿದೆ.
ಇದೀಗ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಶೇ.50ರಷ್ಟು ಹಾಸಿಗೆಗಳನ್ನು ಪಡೆಯುವ ನಿಟ್ಟಿನಲ್ಲಿ ಲಭ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಲ್ಲಿಯೂ ರಾಜ್ಯ ಸರಕಾರ ಯಶಸ್ವಿಯಾಗಿದೆ.
ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರಂದು ನಗರದ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಗೆ ಭೇಟಿ ನೀಡಿ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಮಾಲಕರು, ವ್ಯವಸ್ಥಾಪಕರ ಜತೆ ಮಾತುಕತೆ ನಡೆಸಿದರಲ್ಲದೆ, ಕೂಡಲೇ ಹಾಸಿಗೆಗಳನ್ನು ನೀಡುವಂತೆ ಮನವೊಲಿಸಿದರು.
ಅನಿರೀಕ್ಷಿತವಾಗಿ ಕೋವಿಡ್ ಸೋಂಕು ಎದುರಾಗಿದ್ದು ಯುದ್ಧದಂಥ ಸನ್ನಿವೇಶ ಬಂದಿದೆ. ಪ್ರತಿಯೊಬ್ಬರೂ ವಿಪತ್ತಿನ ಸಂದರ್ಭದಲ್ಲಿ ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತೇವೆಯೋ ಅಷ್ಟೇ ಹೊಣೆಗಾರಿಕೆಯಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ.
ಇದರ ಜತೆಯಲ್ಲೇ ಸರಕಾರ ಸಾಕಷ್ಟು ಮುನ್ನಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಅಕ್ಟೋಬರ್ ಹೊತ್ತಿಗೆ ಸೋಂಕು ಮತ್ತಷ್ಟು ವ್ಯಾಪಿಸಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಸರಕಾರ ಎಲ್ಲ ರೀತಿಯಲ್ಲೂ ಸನ್ನದ್ಧಗೊಳ್ಳಲೇಬೇಕು.
ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಕೂಡಲೇ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ. 50ರಷ್ಟನ್ನು ಸರಕಾರಕ್ಕೆ ನೀಡಲೇಬೇಕು ಎಂದು ಡಿಸಿಎಂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿದರು.
ಈಗಾಗಲೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಬೇಕಾಗಿತ್ತು, ತುಂಬಾ ತಡವಾಗಿದೆ. ನಾಳೆ ಹೊತ್ತಿಗೆ ಎಲ್ಲಾ ಆಸ್ಪತ್ರೆಗಳು ಈ ಕೆಲಸವನ್ನು ಮಾಡಲೇಬೇಕು. ತಪ್ಪಿದರೆ ಐಎಎಸ್ ಅಧಿಕಾರಿಗಳು ನಿಮ್ಮ ಆಸ್ಪತ್ರೆಗಳಿಗೆ ತಪಾಸಣೆಗೆ ಬರಲಿದ್ದಾರೆ.
ಒಂದು ವೇಳೆ ಆಗ ಸಿಕ್ಕಿಬಿದ್ದರೆ ಕೂಡಲೇ ಆಸ್ಪತ್ರೆಯ ಪರವಾನಗಿಯೇ ರದ್ದಾಗುತ್ತದೆ. ಇಂಥ ಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ. ಯಾವುದೇ ನೆಪ ಹೇಳದೇ ತಕ್ಷಣವೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಿ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಈಗಾಗಲೇ ಹಲವು ಸಲ ಮನವಿ ಮಾಡಿದ್ದೇವೆ. ಇದಕ್ಕೆ ಕೆಲವರು ಕಿವಿಗೊಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸರಕಾರ ಸಹಿಸುವುದಿಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಈ ಬಗ್ಗೆ ಸ್ಷಷ್ಟ ಆದೇಶ ನೀಡಿದ್ದಾರೆ.
ಸರಕಾರದ ಆದೇಶ ಪಾಲಿಸಿದ ಆಸ್ಪತ್ರೆಗಳಿಗೆ ಕೂಡಲೇ ನೀರು ಮತ್ತು ವಿದ್ಯುತ್ ಸರಬರಾಜು ನಿಲ್ಲಿಸುವುದೂ ಸೇರಿದಂತೆ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ನೀವು ಚಿಕಿತ್ಸೆ ನೀಡುವ ಕೋವಿಡ್ ರೋಗಿಗಳ ಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ತಮ್ಮ ವೃತ್ತಿ ಧರ್ಮದಿಂದ ಪಲಾಯನ ಮಾಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ