ಸಹಸ್ರಾರು ಭಕ್ತರ ಸಮ್ಮುಖ ಉಳವಿ ಚೆನ್ನ ಬಸವೇಶ್ವರ ರಥೋತ್ಸವ ಸಂಪನ್ನ
Team Udayavani, Feb 20, 2019, 1:42 AM IST
ಜೋಯಿಡಾ: ಅಡಿಕೇಶ್ವರ ಮಡಿಕೇಶ್ವರ ಉಳವಿ ಚೆನ್ನಬಸವೇಶ್ವರ..ಹರ ಹರ ಮಹಾದೇವ.. ಎಂಬ ಘೋಷಣೆಯೊಂದಿಗೆ ಉಳವಿ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಸಂಜೆ 4 ಗಂಟೆಗೆ ಸಂಪ್ರದಾಯದಂತೆ ಚೆನ್ನಬಸವೇಶ್ವರರ ಮಹಾರಥಕ್ಕೆ ಪೂಜೆ ಸಲ್ಲಿಸಿದ ನಂತರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತಾದಿಗಳು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ಕೆಲವರು ಹರಕೆ ಸಲ್ಲಿಸಿದರು.
ಈ ಬಾರಿ ರಾಜ್ಯದ ವಿವಿಧೆಡೆ ಬರದ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಸುಮಾರು 40ರಿಂದ 50 ಸಾವಿರ ಭಕ್ತರು ಪಾಲ್ಗೊಂಡಿದ್ದರು.