ಬೀದಿರಂಪ ಮಾಡ್ಬೇಡಿ: ಪಂಚಪೀಠ ಜಗದ್ಗುರುಗಳ ಕಳಕಳಿ
Team Udayavani, Aug 2, 2017, 6:15 AM IST
ಹುಬ್ಬಳ್ಳಿ: “ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂಬುದು ಸಮಾಜದ ಬಹುತೇಕ ಮಂದಿಯ ಒಲವು. ಆದರೆ ಈ ಕುರಿತ ಭಿನ್ನಾಭಿಪ್ರಾಯ ಸಮಾಜದೊಳಗೆ ಇತ್ಯರ್ಥವಾಗಬೇಕೇ ವಿನಃ ಬೀದಿರಂಪವಾಗಬಾರದು. ಸಮಾಜ ಕಟ್ಟುವ ಬದಲು ಒಡೆಯುವ ಕಾರ್ಯಕ್ಕೆ ಸಮಾಜ ಬೆಂಬಲ ನೀಡುವುದು ಬೇಡ..’
-ಇದು ಪಂಚಪೀಠಗಳ ನಾಲ್ವರು ಜಗದ್ಗುರುಗಳ ಆಶಯ. ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ ಕುರಿತು ರಂಭಾಪುರಿ, ಕಾಶಿ, ಉಜ್ಜಯಿನಿ ಹಾಗೂ ಶ್ರೀಶೈಲ ಪೀಠಗಳ ಜಗದ್ಗುರುಗಳು ತಮ್ಮ ಅಭಿಪ್ರಾಯವನ್ನು “ಉದಯವಾಣಿ’ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಈ ಸಂಬಂಧ ಕೇದಾರ ಜಗದ್ಗುರುಗಳ ಪ್ರತಿಕ್ರಿಯೆ ಸಿಗಲಿಲ್ಲ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಣದ ಕೈಗಳು, ರಾಜಕೀಯ ಹಿತಾಸಕ್ತಿ ತನ್ನದೇ ಪ್ರಭಾವ ಬೀರುತ್ತಿದೆ. ಇದನ್ನು ಸಮಾಜ ಅರ್ಥ ಮಾಡಿ
ಕೊಳ್ಳಬೇಕು ಎಂಬುದು ಜಗದ್ಗುರುಗಳ ಅನಿಸಿಕೆ.
ಅವರ ಒಟ್ಟಾರೆ ಆಶಯ ಇಲ್ಲಿ ನೀಡಲಾಗಿದೆ:
“ವೀರಶೈವ-ಲಿಂಗಾಯತ ಪ್ರತ್ಯೇಕವಾಗಲು ಸಾಧ್ಯವೇ ಇಲ್ಲ. 1904ರಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ರಚನೆ ಮಾಡಿದ್ದು ಪಂಚಪೀಠಗಳಲ್ಲ, ವಿರಕ್ತ ಪರಂಪರೆಯ ಕುಮಾರ ಹಾನಗಲ್ಲ ಕುಮಾರಸ್ವಾಮಿಯವರು. ಲಿಂಗಾಯತ
ಧರ್ಮ ಎಂಬುದಿದ್ದರೆ ಅವರೇಕೆ ಅಂದು ಅಖೀಲ ಭಾರತ ಲಿಂಗಾಯತ ಮಹಾಸಭಾ ಎಂದು ಮಾಡಲಿಲ್ಲ. ಅವರಿಗೆ ಸತ್ಯ ಏನೆಂಬುದು ತಿಳಿದಿತ್ತು” ವೀರಶೈವ-ಲಿಂಗಾಯತ ಧರ್ಮ ಸಮನ್ವಯತೆ ಹಾಗೂ ಸಾಮರಸ್ಯದ ಧರ್ಮವಾಗಿದೆ.
ವೀರಶೈವ ಮಠಮಾನ್ಯಗಳು ಅನ್ನ, ಅಕ್ಷರ, ಆಶ್ರಯವನ್ನು ಜಾತಿ ಭೇದ ಮಾಡದೆ ನೀಡುತ್ತಾ ಬಂದಿವೆ. ಇದೊಂದು ವಿಶಾಲ ಆಲದ ಮರವಾಗಿದೆ. ಇದರಡಿ ಎಲ್ಲರೂ ಸೇರಿ ಜತೆಗೂಡಿ ಸಾಗಬೇಕು.’ “ಪಂಚಪೀಠಗಳು ಬಸವಣ್ಣನವರ ವಿರೋಧಿಗಳಲ್ಲ. ಬಸವಣ್ಣನವರೇ “ಶೈವ ಧರ್ಮ ತೊರೆದು ವೀರಶೈವ ಧರ್ಮ ಸ್ವೀಕರಿಸಿದೆ’ ಎಂದಿದ್ದಾರೆ.
ಅವರೊಬ್ಬ ಧರ್ಮ ಸುಧಾರಕ ಎಂಬುದನ್ನು ಪಂಚಪೀಠಗಳೂ ಹೇಳುತ್ತಿವೆ. ಬಸವಣ್ಣ ಸೇರಿ ವಚನಕಾರರ ವಚನಗಳಲ್ಲಿ ಲಿಂಗಾಯತ ಎಂಬ ಶಬ್ದ ಬಳಕೆ ಇಲ್ಲ. ಹೀಗಿರುವಾಗ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಬೇಡಿಕೆ-ಒತ್ತಾಯವೇಕೆ?’
ಷಡ್ಯಂತ್ರಕ್ಕೆ ಬಲಿ ಬೇಡ: “ಲಿಂಗಾಯತ ಸ್ವತಂತ್ರ ಧರ್ಮದ ಯತ್ನ, ಲಿಂಗಾಯತ ಮಹಾಸಭಾ ರಚನೆಯ ಹೇಳಿಕೆ ಸಮಾಜದ ಹಿತ ದೃಷ್ಟಿಯಿಂದ ಸರಿಯಲ್ಲ. ವೀರಶೈವ ಧರ್ಮ ಹಿಂದೂ ಧರ್ಮದ ಭಾಗವಾಗಿಯೇ ಬಂದಿದೆ.
ಇಂದಿಗೂ ಅನೇಕ ವಿರಕ್ತರು ಹಾಗೂ ಬಸವಣ್ಣ ವರ ಅನುಯಾಯಿಗಳೆಂದು ಹೇಳಿಕೊಳ್ಳುವವರು ಮಠದಲ್ಲಿ ಗದ್ದುಗೆ ಪೂಜೆ, ರುದ್ರಾಭಿಷೇಕ, ತೇರು, ಪಲ್ಲಕ್ಕಿ, ಮಂತ್ರ ಪಠಣ ಮಾಡುತ್ತಾರೆ.
ಮಠಾಧೀಶರು ಧರಿಸುವ ಕಾವಿ, ಆವಿಗೆ, ರುದ್ರಾಕ್ಷಿ ಇವೆಲ್ಲವೂ ಹಿಂದೂ ಧರ್ಮದ ಪರಂಪರೆಯ ಭಾಗವಾಗಿದ್ದು, ಇವುಗಳೆಲ್ಲವನ್ನು ನಿರಾಕರಿಸಲು ಸಿದಟಛಿರಿದ್ದಾರೆಯೇ?’ ಭಿನ್ನಾಭಿಪ್ರಾಯ ಕುರಿತು ಚರ್ಚೆಯಾಗಲಿ. ಅದು ಬಿಟ್ಟು ಗುರುಗಳ ಪ್ರತಿಕೃತಿ ದಹನ, ಅವಮಾನ ತರವಲ್ಲ. ಇದು ವೀರಶೈವ-ಲಿಂಗಾಯತ ಸಂಸೃತಿಯೂ ಅಲ್ಲ. ಇದನ್ನು ಯಾರೇ ಮಾಡಿದ್ದರೂ ಅದು ತಪ್ಪೇ. ಲಿಂಗಾಯತ ಪ್ರತ್ಯೇಕ ಧರ್ಮದ ಹಿಂದೆ ಕಾಣದ ಕೈಗಳ ಹಿತಾಸಕ್ತಿ, ರಾಜಕೀಯ
ಲಾಭ ಪಡೆಯುವ ಷಡ್ಯಂತ್ರವಿದೆ. ಇದಕ್ಕೆ ಸಮಾಜ ಬಲಿಯಾಗುವುದು ಬೇಡ. ಶ್ರಾವಣ ಹಾಗೂ ಗಣೇಶ ಚತುರ್ಥಿ ಮುಗಿದ ಅನಂತರದಲ್ಲಿ ಪಂಚಪೀಠಗಳು ಹಾಗೂ ವೀರಶೈವ-ಲಿಂಗಾಯತ ಚಿಂತನೆ ಒಪ್ಪುವ ವಿವಿಧ ಮಠಾಧೀಶರು ಸಭೆ ಸೇರಿ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು. ಅನಗತ್ಯ ಗೊಂದಲ ಹಾಗೂ ಸಮಾಜ ಒಡೆಯುವ ಕಾರ್ಯಕ್ಕೆ ಯಾರೂ ಕೈ ಜೋಡಿಸುವುದು ಬೇಡ’ ಎಂಬುದು ಶ್ರೀಗಳ ಅನಿಸಿಕೆ.