ಸಿದ್ದರಾಮಯ್ಯರನ್ನು ಹೊಗಳಿದ ವಿಶ್ವನಾಥ್
Team Udayavani, Nov 24, 2019, 3:00 AM IST
ಹುಣಸೂರು: ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದವರೂ ಇಷ್ಟ ಪಡುತ್ತಾರೆ, ಅವರೇನು ಭ್ರಷ್ಟಾಚಾರಿಯಲ್ಲ. ಆದರೆ ಹಿತ್ತಾಳೆ ಕಿವಿಯಷ್ಟೆ ಎಂದು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ತಮ್ಮ ರಾಜಕೀಯ ವಿರೋಧಿಯನ್ನು ಪ್ರಶಂಸಿಸಿ ಅಚ್ಚರಿ ಮೂಡಿಸಿದರು.
ತಾಲೂಕಿನ ಗಾವಡಗೆರೆ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಶೀರೇನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಒಳ್ಳೆಯ ಆಡಳಿತಗಾರ, ಎಲ್ಲ ಜನರೂ ಹಾಗೂ ನಾನೂ ಇಷ್ಟ ಪಡುತ್ತೇನೆ ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಸದಾ ಟೀಕೆ ಮಾಡುತ್ತಿದ್ದ ವಿಶ್ವನಾಥ್ ಎಚ್ಚರಿಕೆಯ ನಡೆ ಪ್ರದರ್ಶಿಸಿದರು.
ದೇವೇಗೌಡರ ಬಗ್ಗೆ ಅಭಿಮಾನ: ನಾನು ಜೀವ ಇರುವವರೆಗೂ ಮನೆಯಲ್ಲಿ ದೇವೇಗೌಡರ ಪೋಟೋ ಇಟ್ಟು ಪೂಜೆ ಮಾಡ್ತೇನೆ. ಅವರ ವಿರುದ್ಧ ಒಂದೂ ಮಾತಾಡಲ್ಲ, ನನಗೆ ರಾಜಕೀಯ ಸ್ಥೈರ್ಯ ಕೊಟ್ಟವರು ದೇವೇಗೌಡರೆಂದು ಅಭಿಮಾನ ವ್ಯಕ್ತಪಡಿಸಿದರು.