ವಿಶ್ವನಾಥ್ ಹೇಳಿಕೆ ಸದಭಿರುಚಿ ನಡವಳಿಕೆಯಲ್ಲ: ಕೃಷ್ಣ ಬೈರೇಗೌಡ
Team Udayavani, May 14, 2019, 3:05 AM IST
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕರ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆ ಸಾರ್ವಜನಿಕ ಜೀವನದಲ್ಲಿ ಸದಭಿರುಚಿಯ ನಡವಳಿಕೆ ಅಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬರ ಪರಿಶೀಲನೆಗೆಂದು ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ ಎಂಬುದು ನಿರ್ವಿವಾದ, ಈ ನಾಡಿನ ಜನತೆಯೇ ಒಪ್ಪಿಕೊಂಡಿದ್ದಾರೆ, ವಿಶ್ವನಾಥ್ರ ಹೇಳಿಕೆಗೆ ನಾನೇನು ವಿಚಲಿತನಾಗಿಲ್ಲ ಮತ್ತು ಸಿದ್ದರಾಮಯ್ಯ ಅವರ ನಡವಳಿಕೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
ಚುನಾವಣೆ ಫಲಿತಾಂಶದ ಆಧಾರದ ಮೇಲೆಯೇ ಮುಖ್ಯಮಂತ್ರಿ ಸಮರ್ಥನೆಂದು ಭಾವಿಸಲು ಆಗಲ್ಲ, ಸೋಲು ಗೆಲುವು ಬೇರೆ, ಅರಸು ಸಹ ಚುನಾವಣೆಯಲ್ಲಿ ಸೋತಿದ್ದರು, ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಸರಕಾರವೂ ಸೋಲುಂಡಿತ್ತು. ಚುನಾವಣೆಯೊಂದೇ ಉತ್ತಮ ಆಡಳಿತಕ್ಕೆ ಮಾನದಂಡವಲ್ಲ ಎಂದರು.