ನೈತಿಕ ಬಲ ಕುಗ್ಗಿಲ್ಲ; ಹೋರಾಟಕ್ಕೆ ಯೋಧರು ಸಿದ್ಧ: ಸಚಿವೆ ನಿರ್ಮಲಾ
Team Udayavani, Feb 20, 2019, 12:29 AM IST
ಬೆಂಗಳೂರು: ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಗ್ಗಿಲ್ಲ. ಯಾವುದೇ ರೀತಿಯ ಹೋರಾಟ ನಡೆಸಲು ಯೋಧರು ಸಜ್ಜಾಗಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ-2019′ ಪೂರ್ವಭಾವಿಯಾಗಿ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸೈನಿಕರಿಗೆ ಉಗ್ರರ ದಾಳಿ ಮತ್ತು ಪಾಕಿಸ್ಥಾನದ ಗಡಿ ಪುಂಡಾಟಿಕೆ ನಿಯಂತ್ರಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇದರೊಂದಿಗೆ ನಮ್ಮ ಇಲಾಖೆ ಮತ್ತು ದೇಶದ ಜನ ನೈತಿಕ ಬೆಂಬಲ ನೀಡಿರುವುದರಿಂದ ಯೋಧರು ತಮ್ಮ ಕೆಲಸದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪುಲ್ವಾಮಾ ದಾಳಿ ಬಳಿಕ ಸೈನಿಕರಿಗೆ ದೇಶದ ಜನರ ಬೆಂಬಲ ಇಮ್ಮಡಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಉಗ್ರವಾದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಈ ಹಿಂದೆ ನಡೆದಿರುವ ದಾಳಿಗಳಿಗೆ ಪಾಕಿಸ್ಥಾನ ಯಾವ ರೀತಿಯ ಕ್ರಮ ಕೈಗೊಂಡಿದೆ ಅಥವಾ ಭಾರತಕ್ಕೆ ತಾವು ಸಹಾಯ ಮಾಡಿದ್ದೀರಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿದ ನಿರ್ಮಲಾ ಸೀತಾರಾಮನ್, ನ್ಯಾಯಾಲಯಗಳು ಈ ಬಗ್ಗೆ ಸೂಚನೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ಧಾಳಿ ನಡೆಸಿದರು.