ನಮ್ಮ ಎಚ್ಚರದಲ್ಲಿ ನಾವಿರಬೇಕು: ವಿ.ಸೋಮಣ್ಣ
Team Udayavani, Jun 27, 2020, 6:42 AM IST
ಚಿತ್ರದುರ್ಗ: ಕೋವಿಡ್ 19 ಕುರಿತು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅನೇಕ ತಜ್ಞರು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ತಲುಪಬಹುದು. ಸಾವಿನ ಸಂಖ್ಯೆ 50 ಸಾವಿರ ಮುಟ್ಟಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ನಮ್ಮ ಎಚ್ಚರದಲ್ಲಿ ನಾವಿರಬೇಕು. ಮಿಗಿಲಾಗಿ ದೇವರಿದ್ದಾನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರು ಲಾಕ್ಡೌನ್ ಮಾಡುವ ಉದ್ದೇಶ ಇಲ್ಲ. ಆದರೆ, ಸೋಂಕು ಪತ್ತೆಯಾದ ಭಾಗದಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗುವುದು. ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಐದಾರು ಕಡೆ ಗೊಂದಲವಾಗಿದೆ. ಆದರೆ, ಒಂದು ಸಾವಿರ ಬೆಡ್ ಹಾಗೂ ನೂರು ಆ್ಯಂಬುಲೆನ್ಸ್ ಸಿದ್ಧ ಮಾಡಿಕೊಳ್ಳಲಾಗಿದೆ.
ಕೋವಿಡ್ 19 ನಾವು ಮಾಡಿದ್ದಲ್ಲ. ಪ್ರಕೃತಿಯಿಂದ ಆಗಿರುವ ಘಟನೆ. ಎಲ್ಲರೂ ಒಟ್ಟಾಗಿ ನಿಭಾಯಿಸಬೇಕು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕುಟುಂಬಕ್ಕೆ ಸೋಂಕು ತಗುಲಿದ್ದರಿಂದ ಕ್ವಾರಂಟೈನ್ ಆಗಿದ್ದಾರೆ. ಈ ಕಾರಣಕ್ಕೆ ಕಳೆದ ಮೂರು ದಿನ ಸಮಸ್ಯೆಯಾಗಿದೆ. ಬೆಂಗಳೂರಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.