ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್
Team Udayavani, Apr 18, 2021, 4:22 PM IST
ಬೆಂಗಳೂರು: ಕೋವಿಡ್ 19 ಸೋಂಕು ತಡೆಗೆ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆ, ನಿರ್ದೇಶನಗಳನ್ನು ಪಾಲಿಸುತ್ತೇವೆ. ಅಂತಿಮವಾಗಿ ಸಿಎಂ ನಿರ್ದೇಶನ ಮುಖ್ಯ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಹೇಳಿದರು.
ಗೃಹಸಚಿವ ಬಸವರಾಜ್ ಬೊಮ್ಮಯಿ, ಕಂದಾಯ ಸಚಿವ ಆರ್.ಅಶೋಕ್ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾಂಕ್ರಾಮಿಕ ರೋಗ. ಬೇರೆ ಬೇರೆ ದೇಶದಲ್ಲಿ ಯಾವ ಕ್ರಮ ತೆಗೆದುಕೊಂಡಿದ್ದಾರೆ. ಸೋಂಕು ನಿಯಂತ್ರಿಸಲು ಏನೆಲ್ಲಾ ಕ್ರಮ ತೆಗೆದುಕೊಂಡಿದ್ದಾರೆಂದು ಗಮನಿಸಿದ್ದೇವೆ ಎಂದರು.
ಖಾಸಗಿ ಆಸ್ಪತ್ರೆಗಳ ಕ್ರಮ ಸರಿ ಎನಿಸಿಲ್ಲ. ಬೆಡ್ ನೀಡುವವಿಚಾರ ಸಮಾಧಾನ ತರಿಸಿಲ್ಲ. ಇಂದಿನಿಂದ ಕ್ರಮ ಜರುಗಿಸಲು ಸಿದ್ಧರಾಗಿದ್ದೇವೆ ಎಂದು ಮುಂದೆ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುಧಾಕರ್ ಎಚ್ಚರಿಕೆ ನೀಡಿದರು.
ಗೃಹಸಚಿವ ಬೊಮ್ಮಯಿ, ಕಂದಾಯ ಸಚಿವ ಆರ್.ಅಶೋಕ್ ಜೊತೆ ಸಭೆ ಮಾಡಿದ್ದೇವೆ. ನಾಳೆಯ ಸಭೆಯ ಪೂರ್ವಬಾವಿಯಾಗಿ ಇಂದು ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಬೆಂಗಳೂರು ಪರಿಸ್ಥಿತಿ, ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಾಯಿತು. ಗೃಹ ಇಲಾಖೆಯಿಂದಲೂ ಮಾಹಿತಿ ಪಡೆಯಲಾಗಿದೆ. ನಾಳೆ ಸಂಸದರು, ಶಾಸಕರ ಜೊತೆ ಸಮಗ್ರವಾಗಿ ಸಭೆ ಮಾಡಲಾಗುವುದು. ಅದರಲ್ಲಿ ಅಭಿಪ್ರಾಯ ಸಂಗ್ರಹಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.