ಮಹಾಮಳೆ ಸಂದರ್ಭ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲಿದ್ದರು ?
Team Udayavani, May 30, 2018, 10:34 AM IST
ಮಂಗಳೂರು: ಮಂಗಳವಾರ ಮಳೆ ಶುರುವಾಗುವ ಹೊತ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಂದಿನಂತೆ ಇಂದೂ ಕೂಡ ಸಾಮಾನ್ಯ ಮಳೆ ಎಂದೇ ಭಾವಿಸಿದ್ದರು. ಆದರೆ, ಮಳೆ ತೀವ್ರವಾಗಿ ನೆರೆ ಪರಿಸ್ಥಿತಿ ಉದ್ಭವವಾಗುತ್ತಿದ್ದಂತೆ ಎಲ್ಲರೂ ಎಚ್ಚೆತ್ತು ಕೊಳ್ಳುವಂತಾಯಿತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವೇಳೆ ಎಲ್ಲಿದ್ದರು ಎಂಬುದನ್ನು ತಿಳಿದುಕೊಳ್ಳಲು ಉದಯವಾಣಿ ಅವರನ್ನು ಸಂಪರ್ಕಿಸಿದಾಗ ತಿಳಿದು ಬಂದಿದ್ದು ಇಷ್ಟು…
ಬಂಟ್ವಾಳ ಶಾಸಕರು
ಬಂಟ್ವಾಳ: ಖಾಸಗಿ ಕಾರ್ಯದ ನಿಮಿತ್ತ ಮುಂಬಯಿಗೆ ತೆರಳಿದ್ದ ಶಾಸಕರು ರಾಜೇಶ್ ನಾೖಕ್ ಉಳೆಪಾಡಿ ಅವರು ಮಂಗಳವಾರ ಕ್ಷೇತ್ರಕ್ಕೆ ಮರಳಿದ್ದು ಮಳೆ ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು ಹಾಗೂ ತತ್ಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಬುಧವಾರ ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ
ಬೆಳ್ತಂಗಡಿ ಶಾಸಕರು
ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಮಂಗಳೂರು, ಬಂಟ್ವಾಳ ಮೂಲಕ ಬೆಳ್ತಂಗಡಿ, ಧರ್ಮಸ್ಥಳಕ್ಕೆ ಆಗಮಿಸುವ ಬಸ್ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದು. ಈ ವೇಳೆ ಶಾಸಕ ಹರೀಶ್ ಪೂಂಜ ಅವರು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಬಂಟ್ವಾಳದಿಂದ ಬೆಳ್ತಂಗಡಿ ಮತ್ತು ಧರ್ಮಸ್ಥಳಕ್ಕೆ ಬದಲಿ ಬಸ್ಗಳ ವ್ಯವಸ್ಥೆ ಮಾಡಿಸಿದರು.
ಮೂಡಬಿದಿರೆ ಶಾಸಕರು
ಮೂಡಬಿದಿರೆ: ನೂತನ ಶಾಸಕ ಉಮಾನಾಥ ಕೋಟ್ಯಾನ್ ಅವರು ಕ್ಷೇತ್ರಾದ್ಯಂತ ಮಳೆ ಹಾನಿಯ
ವೀಕ್ಷಣೆ ನಡೆಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬುಧವಾರ ಮೂಡ
ಬಿದಿರೆಗೆ ಆಗಮಿಸುವುದಾಗಿ ಅವರು ತಿಳಿಸಿದ್ದಾರೆ.
ಸುಳ್ಯ ಶಾಸಕರು
ಸುಳ್ಯ: ಇಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೂ ಶಾಸಕ ಎಸ್. ಅಂಗಾರ ಅವರು ಕ್ಷೇತ್ರದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ನೆಟ್ಟಾರಿನಲ್ಲಿ ಸಿಡಿಲು ಬಡಿದ ಮನೆಗೆ, ಹೊಸ ಮಠ ಸೇತುವೆ ಕುಸಿತದ ಸ್ಥಳಕ್ಕೆ ಭೇಟಿ ನೀಡಿದರು. ಮಳೆ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಸೂಚಿಸಿದ್ದಾರೆ.
ಮಂಗಳೂರು ಉತ್ತರ ಶಾಸಕರು
ಮಳೆ ಸಂದರ್ಭ ಮಹಿಳೆಯೊಬ್ಬರು ಮಣ್ಣಿನಡಿಗೆ ಸಿಲುಕಿದ ಸುದ್ದಿ ಕೇಳಿ ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ ಸ್ಥಳಕ್ಕೆ ಧಾವಿಸಿದ್ದಾರೆ. ಮಳಲಿಯತ್ತ ತೆರಳುತ್ತಿದ್ದ ಅವರು ಕಾರ್ಯಕ್ರಮ ಮೊಟಕುಗೊಳಿಸಿ ಧಾವಿಸಿದ್ದಾರೆ.
ಮಂಗಳೂರು ದಕ್ಷಿಣ ಶಾಸಕರು
ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಂಗಳೂರರಿಗೆ ತೆರಳಿದ್ದ ಮಂಗಳೂರು ದಕ್ಷಿಣ ಶಾಸಕ, ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮ ಮೊಟಕುಗೊಳಿಸಿ, ಮಂಗಳೂರಿಗೆ ಆಗಮಿಸಿದ್ದಾರೆ.ಬಳಿಕ ಅಳಕೆಯ
ಲ್ಲಿರುವ ಗುಜರಾತಿ ಶಾಲೆಯ ಬಳಿ ತೆರಳಿ ಅಲ್ಲಿ ರಕ್ಷಣಾ ಕಾರ್ಯಗಳಿಗೆ ಸಹಕಾರ ನೀಡಿದ್ದಾರೆ.
ಉಳ್ಳಾಲ ಶಾಸಕರು
ಭಾರೀ ಮಳೆ ಕಾರಣ ತೊಕ್ಕೊಟ್ಟುವಿನಲ್ಲಿ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನೀರು ನುಗ್ಗಿ ನಷ್ಟ ವಾಗಿರುವ ಅಂಗಡಿ ಮಾಲಿಕರಿಗೆ ಸೂಕ್ತ ಪರಿಹಾರನೀಡ ಲಾಗುವುದು ಮತ್ತು ಹೆದ್ದಾರಿ ಇಲಾಖೆಯ ಅಸಡ್ಡೆ ಯಿಂದ ಕಾಮಗಾರಿ ವಿಳಂಬವಾಗಲು ಕಾರಣವಾ ಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ದೂರು ನೀಡಲಾಗುವುದು ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಕಾಪು ಶಾಸಕರು
ಕಾಪು: ತೀವ್ರ ಮಳೆಯಿಂದಾಗಿ ಹಾನಿಗೊಳಗದ ಕಾಪು, ಉದ್ಯಾವರ, ಪಡುಬಿದ್ರಿ, ಶಿರ್ವ, ಕಟಪಾಡಿ ಸಹಿತ ವಿವಿಧ ಪ್ರದೇಶಗಳಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ತುರ್ತು ಭೇಟಿ ನೀಡಿ ಪರಿಶೀಲನೆ ನಡೆಸಿ ದರು ಹಾಗೂ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ತೊಂದರೆ ಸಂದರ್ಭ ಸ್ಥಳೀಯ ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸುವಂತೆ, ಸಂಘ-ಸಂಸ್ಥೆಗಳು ಜನರಿಗೆ ಸಹಾಯ ಮಾಡುವಂತೆ ಕರೆ ನೀಡಿದರು. ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ನೇತೃತ್ವ ದಲ್ಲಿ 24ಗಿ7 ಮಾದರಿಯ ನೆರವಿನ ತಂಡ ಸನ್ನದ್ಧಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಾರ್ಕಳ ಶಾಸಕರು
ಕಾರ್ಕಳ: ಶಾಸಕ ಸುನಿಲ್ ಕುಮಾರ್ ಅವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಜತೆಗೆ ತುರ್ತು ಸಂದರ್ಭ ನೆರವಾಗಲು ಇನ್ನೂ 3 ಇನ್ನು ಮೂರು ದಿನಗಳ ಕಾಲ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಕಳದಲ್ಲೇ ಇರಲು ಸೂಚನೆ ನೀಡಿದ್ದೇನೆ ಎಂದು ಉದಯವಾಣಿಗೆ ತಿಳಿಸಿದ್ದಾರೆ. ವಿದ್ಯುತ್ ಕಂಬ, ಇತರ ವಿದ್ಯುತ್ ಪರಿಕರಗಳು ಹಾನಿ
ಗೊಂಡಿರುವಲ್ಲಿ ತತ್ಕ್ಷಣ ಸರಿಪಡಿಸುವ ಕಾರ್ಯ ಮಾಡಲು ಸೂಚಿಸಲಾಗಿದೆ. ಹಾಗೆಯೇ
ಅಗ್ನಿಶಾಮಕ ಇಲಾಖೆಯ ಸಿಬಂದಿಯೂ ಠಾಣೆ ಯಲ್ಲೇ ಇರುವಂತೆ ತಿಳಿಸಿದ್ದಾರೆ.
ಉಡುಪಿ ಶಾಸಕರು
ಉಡುಪಿ: ರವಿವಾರ ಮತ್ತು ಸೋಮವಾರ ಮಳೆ ಹಾನಿ ಪ್ರದೇಶಗಳಿಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಮಂಗಳವಾರ ತಹಶೀಲ್ದಾರರು ಮತ್ತು ಇತರ ಕಂದಾಯ ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಮೇ 30ರಂದೂ ಅವರು ಹಾನಿಗೊಳಗಾದ ಪ್ರದೇಶ
ಗಳಿಗೆ ಭೇಟಿ ನೀಡಲಿದ್ದಾರೆ.
ದ.ಕ.ಜಿಲ್ಲಾಧಿಕಾರಿ
ತೀವ್ರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಶಶಿಕಾಂತ್ ಸೆಂಥಿಲ್ ಬೆಳಗ್ಗೆಯೇ ಜಾಗೃತ
ವಾಗಿದ್ದರು. ಕಚೇರಿಯಲ್ಲೇ ಇದ್ದು, ಎಲ್ಲ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ನಿರ್ದೇಶನ ನೀಡತೊಡಗಿದ್ದರು.
ದ.ಕ. ಸಂಸದ
ಸಂಸದ ನಳಿನ್ ಕುಮಾರ್ ಕಟೀಲು ಅವರು ಗುಂಡ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ವೀಕ್ಷಿಸಿ ಬೆಂಗಳೂರಿಗೆ ಹೊರಟಿದ್ದರು. ಸಕಲೇಶಪುರಕ್ಕೆ ತಲುಪಿದ್ದಾಗ ಮಂಗಳೂರಿನ ಮಳೆ ಹಾನಿ ಬಗ್ಗೆ ಕರೆ ಬಂದಿದ್ದು, ಪ್ರವಾಸ ಮೊಟಕುಗೊಳಿಸಿದ್ದರು. ಬರುವಾಗಲೇ ವಿವಿಧ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದರು.
ಮನಪಾ ಆಯುಕ್ತರು
ಮಳೆಯ ತೀವ್ರತೆ 11.30ಗೆ ಅರಿದ್ದರಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್ ಅವರು ಕಂಟ್ರೋಲ್ ರೂಂ.ನಲ್ಲಿದ್ದುಕೊಂಡು ನಿರ್ದೇಶನ ನೀಡಿದ್ದರು. ಮಧ್ಯಾಹ್ನ ಬಳಿಕ ಅವರು ಪ್ರಮುಖ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.